ಆಶಯ

ಒಂದು ಪುಟ್ಟ ವಾಕ್ಯವೋ ಉದ್ಘಾರವೋ ಅಥವಾ ಇನ್ಯಾವುದೋ ಥರಹದ ಕಥೆಯ ಹುಟ್ಟುವಿಕೆಗೆ ಕಾರಣವಾಗಬಲ್ಲ ಕುಡಿಯನ್ನಿಟ್ಟುಕೊಂಡು ಅದರ ಸುತ್ತ ಓದುಗರ ಕಲ್ಪನೆಗೆ ಬಂದಂತೆ ಕಥೆಕಟ್ಟುವುದು "ಕುಡಿಗತೆಗಳು" ಗುಂಪಿನ ಮೂಲ ಉದ್ದೇಶ . ಹೀಗೆ ಒಂದೇ ಮೂಲದಿಂದ ಹೊರಟ ಹಲವಾರು ಕಥೆಗಳು ವಿವಿಧ ಆಯಾಮ ಪಡೆದುಕೊಳ್ಳುತ್ತಾ ಒಟ್ಟಾರೆಯಾಗಿ ನೋಡಿದಾಗ ಒಂದು ಕಥನಗುಚ್ಛವೇ ನಮ್ಮೆದುರು ತೆರೆದುಕೊಳ್ಳುತ್ತದೆ.ಇಂತಹ ಕಥೆಗಳನ್ನು ಓದಿ ಸಂಭ್ರಮಿಸಲಿರುವ ಪುಟ್ಟ ವೇದಿಕೆ ಇದು .ಆಫೀಸು-ಮನೆ ಸೇರಿದಂತೆ ನಿತ್ಯಜೀವನ ಜಂಜಾಟದಲ್ಲಿ ತೊಡಗಿರುವಾಗ ಆ ಏಕತಾನತೆಯಿಂದ ಹೊರಬಂದು ಒಂದು ಪುಟ್ಟ ಕಥೆ ಕಟ್ಟುವ ಮೂಲಕ ನಮ್ಮೊಳಗಿನ ಸೃಜನಶೀಲತೆಯನ್ನು ಪೋಷಿಸಿ ಮನಸ್ಸು ಬೆಚ್ಚಗಾಗಿಸಿಕೊಂಡರೆ ಈ ಪ್ರಯತ್ನ ಸಾರ್ಥಕ. smile emoticon .

ಬ್ಲಾಗ್ ಆರ್ಕೈವ್

ಸೋಮವಾರ, ಏಪ್ರಿಲ್ 27, 2015

ಪ್ರಯತ್ನ-೮


ಕುಡಿ:"ಹೊಸಲಿನ ಮುಂದೆ ರಂಗೋಲಿಯ ಚುಕ್ಕಿ ತಪ್ಪಿತ್ತು"
(ಕುಡಿಕೃಪೆ:ಚಿನ್ಮಯ ಭಟ್ಟ)

"ಪ್ರಿಯತಮನ ಕಾಯುವಿಕೆಯ ಕಾತುರದಲ್ಲಿ.....
ತಿಂಗಳಾದ ನಂತರ ಕೆಲಸದ ನಿಮಿತ್ತ ಪರದೇಶಕ್ಕೆ ಹೋದ ಪ್ರಿಯತಮನು ತಿರುಗಿ ಮನೆಗೆ ಬರುವ ಸಂದರ್ಭವದು.. ಆ ರಾತ್ರಿಯೆಲ್ಲಾ ಕಣ್ಣಿಗೆ ನಿದಿರೆಯಿಲ್ಲ,ಸದಾ ಕಣ್ಣಿನಲ್ಲಿ ಮುಂಬರುವ ಸಾವಿರಾರು ಸುಂದರ ಕ್ಷಣಗಳು.... ಕೊನೆಗೂ ರಾತ್ರಿ ಕಳೆದು ಮುಂಜಾನೆಯ ಸೂರ್ಯ ಉದಯಿಸುವ ಮುನ್ನವೇ ಸುಂದರ ದಿನವನ್ನು ನೆನೆದು ಮನೆಯ ಅಂಗಳದಲ್ಲಿ ನೀರು ಚುಮುಕಿಸಿ ಅವನ ಬರುವಿಕೆಯ ಮಂಪರಿನಲ್ಲಿ ಹೊಸಲಿನ ಮುಂದೆ ರಂಗೋಲಿಯ ಚುಕ್ಕಿಯೇ ತಪ್ಪಿತು...."
#ರಮೇಶ್ ರಾಮಿ
ಅವಳಿಗೆ ಸದಾ ಅವನದೇ ಧ್ಯಾನ... ಮದುವೆಯಾದ ಮೂರೇ ತಿಂಗಳಿಗೆ ಗಂಡ ದಂಡಿನ ಕರೆಗೆ ಓಗೊಟ್ಟಿದ್ದಾನೆ ನಾಡಿನ ಗಡಿಯಲ್ಲಿ ಕಾದಾಡುತ್ತಿದ್ದಾನೆ... ಈಗೀಕೆಗೆ ಎರಡು ತಿಂಗಳು. ಸಂಜೆಗೇ ಮನೆಯ ಮುಂದೆ ಸಗಣಿ ನೀರು ಹಾಕಿ ಚಂದದ ರಂಗೋಲಿ ಇಡುವ ವಾಡಿಕೆ... ಬೆಳಗಿನಿಂದ ಅವಳ ಮನದಲ್ಲೆಲ್ಲಾ ತಳಮಳ... ಅಂಗಳದಿ ನಿಂದು ಅಂದಾಕೆ ಬಿಡಿಸಿದ "ಹೊಸಲಿನ ಮುಂದಿನ ರಂಗೋಲಿಯ ಚುಕ್ಕಿ ತಪ್ಪಿತ್ತು" ಬಾನಂಗಳದಿ ಅಂದೇ ಮೂಡಿದ ಹೊಚ್ಚಹೊಸ ಚುಕ್ಕಿಯೊಂದು ಮನದನ್ನೆಯತ್ತ ಕಳವಳದಿಂದ ದಿಟ್ಟಿಸುತ್ತಿತ್ತು!
#ಸುರೇಶ ಶೆಟ್ಟಿ
ಮನದೊಳಗೆ ತನ್ನ ನೋಡಲು ಬರುವ ಹುಡುಗ ಹೇಗಿರಬಹುದೆಂಬ ಕಾತುರ ಭಯ ಎರಡೂ ಇತ್ತು. ಪಕ್ಕದ ಮನೆಯ ಗಂಡಸಿನ ಅಸಹ್ಯ ನೋಟ ಪ್ರತಿ ದಿನ ಇರುತಿತ್ತು. ಅಮ್ಮ ಅಂದಳು ಪೇಟೆಗೆ ಹೋಗಿ ಬರುವೆನೆಂದು. ಗಂಡಸಿಗು ಆ ಮಾತು ಕಿವಿಗೆ ಬಿದ್ದಿತ್ತು. ಕಳ್ಳ ಬೆಕ್ಕು ಹಾಲ ಕುಡಿದು ಮನೆಯಿಂದ ಮೆಲ್ಲನೆ ಹೊರಬಂತು. ಪ್ರತಿ ದಿನದಂತೆ ಇಡುತ್ತಿದ್ದ ಹೊಸಲಿನ ಮುಂದೆ ರಂಗೋಲಿಯ ಚುಕ್ಕಿ ತಪ್ಪಿತ್ತು..
#ನಿರ್ಜೀವ(ಸಮನ್ವಿತಾ ಹೊಳ್ಳ)
ವಧುಪರೀಕ್ಷೆಗೆಂದು ಬಂದ ಗಂಡುಗಳೆಲ್ಲಾ 'ಹುಡುಗಿ ಕಪ್ಪು' ಎಂದು ನಿರಾಕರಿಸಿ ಹೋಗುತ್ತಿದ್ದರು.... ಆದರೆ ಮೊನ್ನೆ ಬಂದ ಹುಡುಗ ಮೆಚ್ಚಿ ಒಪ್ಪಿಗೆ ನೀಡಿದ್ದು ಹುಡುಗಿಗೆ ಆಗಸದಲ್ಲಿ ತೇಲಿದ ಸಂಭ್ರಮ.... ಹುಡುಗಿಯೊಂದಿಗೆ ಮಾತನಾಡಬೇಕೆಂದು ಹಿಂದಿನದಿನ ಬಂದು ಮಾತನಾಡಿ ಹೋಗಿದ್ದ... ಅವನಾಡಿದ ಮಾತು ಇನ್ನೂ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ.... "ಮದುವೆಯ ನಂತರ ನೌಕರಿ ಬಿಡುವಂತಿಲ್ಲ .... ಬರುವ ಸಂಬಳವನ್ನೆಲ್ಲಾ ಸಂಪೂರ್ಣವಾಗಿ ತನಗೇ ನೀಡಬೇಕು".... ಹುಡುಗ ಒಪ್ಪಿದ್ದು ತನ್ನನ್ನಲ್ಲ ತನ್ನ ಸಂಬಳವನ್ನು ಎಂಬ ವಿಚಾರ ತನ್ನ ಲೆಕ್ಕಾಚಾರವನ್ನು ತಪ್ಪಿಸಿತ್ತು... ಅದೇ ಚಿಂತೆಯಲ್ಲಿ ಹೊಸಲಿನ ಮುಂದೆ ರಂಗೋಲಿಯ ಚುಕ್ಕಿ ತಪ್ಪಿತ್ತು.
#ಸಂಧ್ಯಾ ಕೌಶಿಕ್
ಬೆಳ್ಳಂ ಬೆಳ್ಳಗ್ಗೆ ಅವನು ಕರೆ ಮಾಡಿದ್ದ, ಯಾಕೋ ಬೇಸರದಲ್ಲಿದ್ದಂತಿತ್ತು, ಮಾತು ಮುಂದುವರಿಸುರಷ್ಟರಲ್ಲೇ ಅಮ್ಮಾ ಬಾಗಿಲಿಗೆ ರಂಗೋಲಿ ಬಿಡಿಸು ಹೋಗೇ ಎಂದು ಗದರಿಬಿಟ್ಟಳು. ಮಾತು ಮುಂದುವರಿಸಿಲ್ಲ, ಅವನ ರಂಗಿನ ಮಾತು ಕೇಳಲೇ ಇಲ್ಲ. ಏಕೆ ಕರೆ ಮಾಡಿದ್ದೋ ತಿಳಿಯುತ್ತಿಲ್ಲ, ಅದು ಈ ಹೊತ್ತಿನಲ್ಲಿ ಎಂದೂ ಕರೆಮಾಡದವ ಇಂದು ಮಾಡಿದ್ದಾನೇ ಏನೋ ಇರಬಹುದು. ಅವನದೇ ಧ್ಯಾನದಲಿ ಬಾಗಿಲು ಸಾರಿಸಿ ರಂಗೋಲಿಯಲಿ ೧೨ರಿಂದ ೪ರ ಚುಕ್ಕಿಯಿಟ್ಟಾಯಿತು ಹೂವಿನ ಚಿತ್ತಾರ ಬಿಡಿಸಬೇಕಿತ್ತು ಯಾಕೋ ಚಿತ್ತಾರ ಮೂಡುತ್ತಲೇ ಇಲ್ಲ ರಂಗೋಲಿಯ ಚುಕ್ಕಿತಪ್ಪಿತ್ತು ಎಂದೆನಿಸುತ್ತೆ. ಇಂದು ಅವನ ಚಿತ್ತದಲಿ ಚುಕ್ಕಿಯ ಚಿತ್ತಾರವೂ ಮೂಡಲಿಲ್ಲ, ಅವನ ಮಾತಿನ ರಂಗು ನನ್ನ ಮುಖದಲೂ ಮೂಡಲಿಲ್ಲ.
#ಸುಗುಣಾ ಮಹೇಶ್
ಪ್ರತಿದಿನ ಹೆಂಡತಿ ತಯಾರಿಸಿದ ತಿಂಡಿ ತಿಂದು ಗಡಿಬಿಡಿಯಿಂದ ಅವನು ಕೆಲಸಕ್ಕೆ ಹೊರಟಾಗ ಹೊಸಲಿನಲ್ಲಿ ರಂಗೋಲಿ ಇರುತ್ತಿತ್ತಾದರೂ ಅವನು ಯಾವತ್ತೂ ಗಮನಿಸಿರಲಿಲ್ಲ. ಅವನಿಗೆ ವ್ಯವಧಾನವಿರುತ್ತಿರಲಿಲ್ಲ. ಇಂದು ಮುಂಜಾನೆ ಅವಳು ರಂಗೋಲಿಯಿಡುತ್ತಿದ್ದಾಗ ತಲೆ ಸುತ್ತು ಬಂದಂತಾಗಿ ಒಳ ಹೋದವಳೇ ಮಲಗಿಬಿಟ್ಟಳು. ಇವನಿಗೆ ತಿಂಡಿಯಿಲ್ಲದೆ ಹೊಟ್ಟೆ ಹಸಿದು ಸಿಟ್ಟು ತಲೆಗೇರಿ ಅವಳಿಗೆ ಬಯ್ದು ಕೆಲಸಕ್ಕೆ ಹೊರಟ. ಅವಳು ಸದ್ದು ಮಾಡದೆ ಒಳಗೊಳಗೇ ಅತ್ತಳು. ಇಂದು ಹೊಟ್ಟೆಗೆ ಏನೂ ಇಲ್ಲದೆ ಹೊರ ಬಂದವನ ಕಣ್ಣಿಗೆ ರಂಗೋಲಿ ಬಿದ್ದು ಸಿಟ್ಟಲ್ಲಿ ಅದನ್ನು ಒದ್ದುಕೊಂಡು ಹೋದ. ಪಕ್ಕದ ಮನೆಯ ಹೆಂಗಸರಿಗೆ ಇವಳು ಹೊಸಲಿನ ಮುಂದೆ ಹಾಕಿದ್ದ ರಂಗೋಲಿಯ ಚುಕ್ಕಿಯಲ್ಲಿ ತಪ್ಪು ಕಂಡಿತು. ಬೇರೇನೂ ಕಾಣಲಿಲ್ಲ.
#ಕಿರಣ ಕುಮಾರ
ಡಿಪ್ಲಮೋ ಮೆಕ್ಯಾನಿಕಲ್ ಓದುವಾಗಿನಿಂದಲೂ ಅವರಿಬ್ಬರೂ ಪ್ರೇಮಿಗಳು. ಮನೆಯವರ ವಿರೋಧದ ನಡುವೆಯೂ ವಿವಾಹವಾದರು. ಎಲ್ಲರಿಂದಲೂ ದೂರವಾಗಿ ಸ್ವತಂತ್ರವಾಗಿ ಕಾಣದೂರಿನಲ್ಲಿ ಬದುಕು ಕಟ್ಟಿದರು. ಸ್ವಂತ ಗ್ಯಾರೆಜೊಂದನ್ನು ಆರಂಭಿಸಿ ಯಾರಹಂಗಿಲ್ಲದೇ ಅದರಲ್ಲಿಯೇ ಗಂಡ ಹೆಂಡತಿ ನೆಮ್ಮದಿಯಾಗಿದ್ದರು. ಈಗವಳು ಆರು ತಿಂಗಳ ಗರ್ಭಿಣಿ. ಇಬ್ಬರ ಸಂತೋಷಕ್ಕೆ ಲೆಕ್ಕವಿಲ್ಲ, ಕಟ್ಟಿದ ಕನಸುಗಳಿಗೆ ಮಿತಿಯಿಲ್ಲ.. ಇನ್ನೇನು ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕೇನ್ನುವಷ್ಟರಲ್ಲಿ ವಿಧಿಯು ಅಟ್ಟಹಾಸ ಮೆರೆದಿತ್ತು. ಗಂಡ ಅಪಘಾತದಲ್ಲಿ ಸ್ಪಾಟ್ ಔಟು. ಹಲವಾರು ಕನಸುಗಳ ರಂಗೋಲಿ ಬಿಡಿಸುತ್ತಿದ್ದ ಆ ದಂಪತಿಗಳ ಬಾಳಿನ "ಹೊಸಲಿನ ಮುಂದೆ ರಂಗೋಲಿಯ ಚುಕ್ಕಿತಪ್ಪಿತ್ತು" ಆದರೂ ದೃತಿಗೆಡದೆ ಏಕಾಂಗಿ ಬಸುರಿ ಮಹಿಳೆ ಕೈಯಲ್ಲಿ ಸ್ಪಾನರ್ ಹಿಡಿದು ಹೊಸ ಚಿತ್ತಾರ ರಚಿಸಲು ಕಾರ್ಯತತ್ಪರಳಾದಳು.
#ಎಂ.ಆರ್.ಸಚಿನ್
ನಿನ್ನೆಯಷ್ಟೇ ಮದುವೆಯಾದ ಗರತಿಯವಳು. ಮದುವೆಯ ಮುಂಚೆ ರಂಗೋಲಿಯಿಟ್ಟ ಅಭ್ಯಾಸವಿಲ್ಲ. ಸಂಪ್ರದಾಯದಂತೆ ಶೋಭನದ ಮರುದಿನ ರಂಗೋಲಿಯ ಡಬ್ಬಿ ಅತ್ತೆಯ ಕೈ ತಪ್ಪಿ ಸೊಸೆಗೆ ಬಂದಿತ್ತು. ಎಲ್ಲೋ ನೋಡಿದ ಎಂಟು ಮತ್ತು ಒಂಭತ್ತರ ಚುಕ್ಕಿಯ ರಂಗೋಲಿ ; ಜನ ಏನು ಹೇಳುತ್ತಾರೋ ಎಂಬ ಭಯದಲ್ಲೇ ಕಲಸಿಹೋಗಿತ್ತು... ಅಂದು “ಹೊಸಿಲ ಮುಂದೆ ರಂಗೋಲಿಯ ‘ಚುಕ್ಕಿ’ ತಪ್ಪಿತ್ತು”.. ಆದರೆ ಚುಕ್ಕಿ ತಪ್ಪಿಲ್ಲವೇನೋ ಎಂಬಂತೆ ರಂಗೋಲಿ ಮೂಡಿತ್ತು... ಜನರ ಉದ್ಗಾರ ಉತ್ಸಾಹ ನೀಡಿತ್ತು..!
#ಸತೀಶ ಹೆಗಡೆ ಶಿರಸಿ
ಅವಳು ಸುಂದರಿ ಆದರೆ ಅನಾಥೆ. ಮೂಲದ ವಿವರಗಳು - ತಂದೆ ತಾಯಿಗಳ ಬಗ್ಗೆ - ಅವಳಿಗೇ ತಿಳಿದಿಲ್ಲ. ಆದರೂ ಅವಳದು ಮೂಲಾ ನಕ್ಷತ್ರವೆಂದು ಮಾತ್ರ ಗೊತ್ತು. ಮೂಲಾ ನಕ್ಷತ್ರವೆಂದು ವಧುಪರೀಕ್ಷೆಗಳಲ್ಲಿ ಅನುತ್ತೀರ್ಣ ಅವಳ ನೊಸಲಿನ ಬರಹ. ಇದನ್ನೇ ನೆನೆಯುತ್ತಾ ಹಳಿಯುತ್ತಾ ತನ್ನ ಪಿ.ಜಿ. ಹಾಸ್ಟೆಲ್‌ ಮುಂದೆ ಬೆಳಿಗ್ಗೆ ರಂಗೋಲಿಯಿಟ್ಟಳು. ಹೊಸಿಲ ಮುಂದೆ ರಂಗೋಲಿಯ ಚುಕ್ಕಿ ತಪ್ಪಿತ್ತು. ಚಿತ್ತಾರವೂ ಹಳಿ ತಪ್ಪಿತ್ತು ತನ್ನ ಮನಸ್ಸಿನಂತೆ.
#ಹರ್ಷ ದೇವನಹಳ್ಳಿ
ಅವಳು 20ರ ತರುಣಿ, ಎಂದಿನ0ತೆ ಮುಂಜಾನೆಯೇ ಎದ್ದು . ಕಸಗುಡಿಸಿ,ಅಂಗಳಕ್ಕೆ ನೀರು ಹಾಕಿದಳು. ಕೈಯಲ್ಲಿ ರಂಗೋಲಿ ಇತ್ತು,ಮನಸು ಎರಡು ವರ್ಷಗಳ ಹಿಂದೆ ಸಾಗಿತ್ತು. ಇಂದಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ ಹೀಗೆ,ಹೀಗೆಯೇ ರಂಗೋಲಿ ಬಿಡಿಸುವಾಗ ಸೈಕಲ್ ಗಂಟೆಯ ಶಬ್ದ ಕೇಳಿತ್ತು. ತಲೆಯೆತ್ತಿ ನೋಡಿದರೆ ಪೇಪರ್ ಹಾಕುವ ಸುಂದರ ತರುನನಿದ್ದ.ಸರಕ್ಕನೆ ಪೇಪರ್ ಎಸೆದು ಹೋಗಿಬಿಟ್ಟ. ಮೊದ ಮೊದಲು ಅವನ ರೂಪಕೆ ಮರುಳಾಗಿದ್ದವಳು ಕ್ರಮೇಣ ಅವನ ದುಡಿತದ ಹುಮ್ಮಸ್ಸು ಏನನ್ನೋ ಸಾದಿಸಬೇಕೆಂಬ ಹಂಬಲ ಎಲ್ಲವನ್ನೂ ಪ್ರೀತಿಸತೊಡಗಿದಳು.ಅವನಿಗೂ ಇವಲೆಂದರೆ ಪ್ರೀತಿ. ಅವರಿಬ್ಬರ ಮನದಲ್ಲಿ ಪ್ರೇಮದ ರಂಗೋಲಿ ಮೂಡಿ ಆಗಿತ್ತು. ಹೀಗೆ 2 ವರ್ಷ ಕಳೆದವು. ಆದರೆ ಇಂದು ಇವಳ ನೀಸ್ಚಿತಾರ್ಥ್ ಇವಳ ದೂರದ ಸಂಬಂದಿಯೊದನೆ.ಅದೇ ಚಿಂತೆಯಲ್ಲಿ ಅವಳು ಬಿಡಿಸುತ್ತಿದ್ದ ಹೊಸಲಿನ ಮುಂದಿನ ರಂಗೋಲಿಯ ಚುಕ್ಕೆ ತಪ್ಪಿತು.ಮಾಮೂಲಿಯಂತೆ ಸೈಕಲ್ ಗಂಟೆ ಕೇಳಿಸಿತು,ಪೇಪರ್ ಎಸೆದ ಅವನು ಮುಗುಳ್ನಕ್ಕ,ಇವಳು ನಗಲಿಲ್ಲ. ತಪ್ಪಿದ ಚುಕ್ಕಿಯ ಸರಿಪಡಿಸಿ ಅದೇ ರಂಗೋಲಿಯ ಪೂರ್ಣಗೊಳಿಸುವ ಬದಲು,ಹೊಸತೇ ರಂಗೋಲಿಯ ಬಿಡಿಸಿದಳು. ಅವನ ಕಡೆಗೂ ನೋಡದೆ ಒಳನಡೆದಳು. ಅಲ್ಲಿಗೆ ಅವರಿಬ್ಬರ ನಡುವಿನ ಪ್ರೇಮದ ರಂಗೋಲಿ ಮಾಸಿ ಹೋಯಿತು.
#ವೆಂಕಟೇಶ ಪಾಟೀಲ
ಹೊಸ ಪರ್ಫ್ಯೂಮನ್ನ ಸೋಕಿಕೊಂಡು ಅವನಷ್ಟಕ್ಕೆ ಹೋಗುತ್ತಿದ್ದ. ಮನೆ ಮುಂದೆ ಗೋಮಯವನ್ನು ಸಾರಿಸಿ ಚಂದದ ರಂಗೋಲಿ ಇಡಲು ಶೇಡಿ ಉಂಡೆ ಪುಡಿ ಮಾಡಿದವಳಿಗೆ ಅವನ ಪರ್ಫ್ಯೂಮಿನ ಘಾಟು ತಾಗಿತು... ಆಆಆಆಆ...ಆಕ್ಷೀ ಅಂದವಳ ರಂಗೋಲಿಯ ಚುಕ್ಕಿ ತಪ್ಪಿತ್ತು, ಅಂಗಳದ ತುಂಬ ಶೇಡಿ ಹರಡಿತ್ತು
#ಶರತ್ ಹೆಗಡೆ
ದಿನಾ ಬೆಳಗೆದ್ದು ತಲೆಸ್ನಾನ ಮಾಡಿ ಹಣೆಬೊಟ್ಟನಿಟ್ಟು ನೆಲಕೆ ನೀರಾಕಿ ರಂಗೋಲಿ ಬಿಡಿಸುವ ಚಟವಿತ್ತು ಆ ಪತಿವ್ರತೆಗೆ,ಅದೊಂದಿನ ಕುಡಿದ ಗಂಡ ರಾತ್ರಿ ಬೇರೊಬ್ಬಳ ಜೊತೆಗೆ ಬಂದದ್ದು ನೆನೆದು ಬಂದ ಕಣ್ಣೀರ ಹನಿಯ ಮಂಜಿಗೆ ರಂಗೋಲಿ ಚುಕ್ಕಿ ತಪ್ಪಿತ್ತು...

#ಜಗದೀಶ ಪಾಟೀಲ
ಗೌರಿ ಬೆಳಗೆದ್ದು ಬಾಗಿಲಿಗೆ ನೀರು ಹಾಕಿ. ರ೦ಗೋಲಿಯ ಚುಕ್ಕಿ ಇಡುವ ಸಮಯ .ಪಕ್ಕದ್ಮನೆ ಲಕ್ಷ್ಮಿ ಬ೦ದು ಅಯ್ಯೋ ನಮ್ಮ ಪುಟ್ಟಾ ಎ೦ಥಾ ತು೦ಟಾ ಅ೦ತೀರಿ ನೀರ ಚೆಲ್ಲಿ ರ೦ಗೋಲಿಯೆಲ್ಲಾ ಅಳಿಸಿ ಹಾಕಿದಾನೆ ರೀ ಪುನಃ ಹಾಕಬೇಕಾಯಿತು ಬ೦ಜೆಯಾಗಿದ್ದ ಗೌರಿ ಹಾಕುತ್ತಿದ್ದ ಚುಕ್ಕಿ ತಪ್ಪಿತು ಮಗುವಿನ ಚಿತ್ರ ಕಣ್ಣ ಮು೦ದೋಡಿತು.
#ಕಲಾವತಿ ಚಂದ್ರಶೇಖರ
ಬೇರೆ ಜಾತಿಯ ಹುಡುಗನೆಂದರೆ ಅಪ್ಪ ಒಪ್ಪುವುದಿಲ್ಲಾ.. ಸಾಯಿಸಿಯೇ ಬಿಟ್ಟನೂ..! ಅಪ್ಪನ ಭಯಕ್ಕೆ ಅವನ ದೊಡ್ದ ಮಗಳು ಹೊಸಿಲು ದಾಟಿದ್ದಳು. ಈಗ ಅಪ್ಪನಿಗೂ ಭಯ!!ಕಾಲೇಜಿಗೆ ಹೋಗುವ ಚಿಕ್ಕ ಮಗಳ ಮೇಲೆ. ಮಗಳ ಕಾಲೇಜಿನವರೆಗೂ ಹೋಗುತ್ತಾನೆ, ಮಗಳು ನಗುನಗುತ್ತಾ ಮಾತಾಡುತ್ತಿದ್ದ ಆಟೋದನಿಗೆ ಗೆಳೆಯರ ಜೊತೆ ಸೇರಿ ಧರ್ಮದೇಟು ನೀಡುತ್ತಾನೆ..! ಅವಳ ಸಹಪಾಠಿ ಹುಡುಗರಿಗೆ ಬೆದರಿಕೆ ಹಾಕುತ್ತಾನೆ.. ಸಂಜೆಯಾದರೆ ಕುಡಿದು ಬಂದು ಕಾಲೇಜಿಗೆ ಹೋಗಬೇಡವೆಂದು ಮನಸೋ ಇಚ್ಛೆ ಬಡಿದು ತಾಕೀತು ಮಾಡುತ್ತಾನೆ. ಅಪ್ಪನ ಕಾರಣದಿಂದ ಇವಳೊಂಟಿಯಾಗಿ ಉಳಿದು ಹೋಗುತ್ತಾಳೆ. ಇಂತಹ ಅಮಾವಾಸ್ಯೆಯ ಕಾರ್ಮೂಗಿಲ ಅವಧಿಯಲ್ಲೇ ಬದುಕಿಗೆ ಬೆಳಂದಿಗಳ ಪರಿಚಯವಾಗಿದ್ದು..! ಇದೀಗ ಚಂದಿರನ ಜೊತೆ ಹೊಸಲಾಚೆ ಹೆಜ್ಜೆ ಇಡುತ್ತಾಳೆ ಶಾಶ್ವತವಾಗಿ ಅಕ್ಕನಂತೆ. ಪಾಪ ಅವನು: ಅವನೊಳಗೆ ಅನುಮಾನದ ಬೀಜ ಮೊಳೆತಾಗಲೇ ಹೊಸಿಲ ಮುಂದಿನ ರಂಗೋಲಿಯ ಚುಕ್ಕಿ ತಪ್ಪಿದುದು ಅವನಿಗೆ ತಿಳಿಯಲೇ ಇಲ್ಲಾ!
# ಸುಷ್ಮಾ ಮೂಡಬಿದ್ರಿ

ಮಂಗಳವಾರ, ಫೆಬ್ರವರಿ 3, 2015

ಪ್ರಯತ್ನ-೭


ಕುಡಿ:"ಹೊರಗೆ ಗವ್ವೆನ್ನುವ ನಡುರಾತ್ರಿ...ಅತ್ತ ನಾಯಿ ಊಳಿಡುತ್ತಿದ್ದರೆ
ಇತ್ತ ಇವರೆಲ್ಲ ಮೆತ್ತಗೆ ಮರೆಯಾದರು"
(ಕುಡಿಕೃಪೆ:ಸುಗುಣಾ ಮಹೇಶ್)

ಆಗ ಸಮಯ ರಾತ್ರಿ ಸುಮಾರು ಒಂಬತ್ತು ಮುಕ್ಕಾಲು ಇರಬಹುದು.. ಹೈ ಹೀಲ್ಡ್ ಶೂ, ಟೈಟ್ ಜೀನ್ಸ್, ಟೀ ಶರ್ಟು, ಕಣ್ಣಿಗೆ ಬ್ಲೂ ಲೆನ್ಸು , ಕರ್ಲಿ ಕೂದಲು, ತುಟಿಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಒಂದು ಕೈಯಲ್ಲಿ ಬ್ಯಾಗು, ಇನ್ನೊಂದು ಕೈಯಲ್ಲಿ ಮೊಬೈಲ್ ಫೋನ್ ಹಿಡಿದ ಒಂದು ಸುಂದರ ಹುಡುಗಿ ಬಸ್ ಸ್ಟಾಪ್ ನಲ್ಲಿ ಬಸ್ಸಿಗೆ ಕಾಯ್ತಾ ಇದ್ದಳು...!! ಬಸ್ ಸ್ಟಾಪಿನಲ್ಲಿ ಹರಟುತ್ತ ಕುಳಿತಿದ್ದ ಹುಡುಗರು ಅವಳನ್ನೇ ಗಮನಿಸುತ್ತಿದ್ದರು..!! ಇದನ್ನು ಕಂಡು ಅವಳು ಮತ್ತಷ್ಟು ದಿಗಿಲುಗೊಂದಳು..!! ನಾನೊಬ್ಬಳು ಫೆಮಿನಿಸ್ಟ್, ಯಾವುದಕ್ಕೂ ಹೆದರೋಲ್ಲಾ, ಏನೇ ಕಷ್ಟ ಬಂದರೂ ಎದುರಿಸುತ್ತೀನಿ, ನಾವು ಯಾವುದಕ್ಕೂ ಕಮ್ಮಿ ಇಲ್ಲಾ ಈ ಪುರುಷ ಪ್ರದಾನ ಸಮಾಜದಲ್ಲಿ, ಹಾಗೇ ಹೀಗೇ ಎಂದು ಉದ್ದುದ್ದ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಆ ಹೆಣ್ಣು ಆ ನಿರ್ಜನ ರಾತ್ರಿಯಲ್ಲಿ ಚಳಿಯಲ್ಲಿಯೂ ಬೆವರ ತೊಡಗಿದ್ದಳು.. " ರಾತ್ರಿ ಇಲ್ಲೇ ಇದ್ದು ಬೆಳಿಗ್ಗೆ ಮನೆಗೆ ಹೋಗು, ಇರೋದು ಒಂದು ಬಸ್ಸು, ಆಟೋಗಳು ಕೂಡ ಸಿಗೋಲ್ಲ.." ಎಂದ ಹಿತೈಷಿಗಳ ಮಾತನ್ನೂ ಕಡೆಗಣಿಸಿ ",, "ಕೇವಲ ಹತ್ತು ಕಿಲೋಮೀಟರು ಅಷ್ಟೇ ತಾನೇ ನಾನೇನು ಭಯಪಡಲು ಹಿಂದಿನ ಕಾಲದ ಹುಡುಗಿಯೇ?" ಎಂದು ಹಟದಿಂದ ಉತ್ತರಿಸಿ ಬಂದು, ರಾತ್ರಿ ಹತ್ತು ಗಂಟೆಯ ಬಸ್ಸನ್ನು ಕಾಯುತ್ತ ನಿಂತಿದ್ದ ಅವಳಿಗೆ ಈಗಿನ ಒಂದೊಂದು ಕ್ಷಣವೂ ಒಂದೊಂದು ಯುಗಗಳಂತೆ ಭಾಸವಾಗತೊಡಗಿತು..!! "ಮಹಿಳೆ ಪುರುಷರಿಬ್ಬರೂ ಸಮಾನರು, ಪುರುಷರಿಗಿಂತಾ ನಾವೇ ಎಲ್ಲಾ ವಿಷಯದಲ್ಲೂ ಮೇಲು, ಅವರಿಗೆ ನಾವು ಹೆದರುವ ಅವಶ್ಯಕತೆ ಏನು?? ನಮಗೂ ಅವರಿಗಿಂತ ಜಾಸ್ತಿ ದೃಡತೆ ಶಕ್ತಿ ಎಲ್ಲಾ ಇದೆ, ಆದರೂ ಈ ಹೆಣ್ಮಕ್ಕಳು ಯಾಕೇ ಹೆದರಿ ಸಾಯ್ತಾರೋ" ಅಂತ ಸಹಚರರ ಎದುರಿಗೆ ವಾದಿಸುತ್ತಿದ್ದ ಅವಳ ವಿಶ್ವಾಸ, ಆಕ್ರೋಶ ಯಾವುದೂ ಆ ಸಮಯಕ್ಕೆ ಅವಳ ಸಾಂತ್ವನಕ್ಕೆ ಬರಲೇ ಇಲ್ಲ..!! ಮನಸ್ಸಿನಲ್ಲಿ ಬರಿಯ ನಕಾರಾತ್ಮಕ ಯೋಚನೆಗಳೇ ಬರ ತೊಡಗಿದವು.. ಪೇಪರ್ ಅಲ್ಲಿ ಓದಿದ್ದು, ಟಿವಿ ಯಲ್ಲಿ ನೋಡಿದ್ದು, ಅತ್ಯಾಚಾರ ಕೊಲೆ ಇವೆ ಅವಳ ತಲೆಯೊಳಗೆ ಸುಳಿದಾಡಿ ಅವಳನ್ನು ಇನ್ನಷ್ಟು ಜರ್ಜರಿತಗೊಳಿಸಿತ್ತು..!! ಆ ಹುಡುಗರು ಕುಳಿತಲ್ಲಿಂದ ಎದ್ದು ಇವಳ ಹತ್ತಿರವೇ ಬರತೊಡಗಿದರು.. ಅವಳ ಕೈ ಕಾಲುಗಳು ಒಂದೇ ಸಮನೆ ನಡುಗತೊಡಗಿತು.. ಅವಳ ಧೈರ್ಯ ಸಿಟ್ಟು ಅಕ್ರೋಶ ಎಲ್ಲವೂ ಆ ಸಮಯದಲ್ಲಿ ಯಾವ ದೇಶದ ಗಡಿ ದಾಟಿತ್ತೋ ಆ ದೇವರಿಗೆ ಗೊತ್ತು.. ಇನ್ನಸ್ಟು ಹತ್ತಿರ ಬಂದ ಹುಡುಗರಲ್ಲಿ ಒಬ್ಬನು ಅವಳನ್ನು ನೋಡಿ, ಅವಳ ಮುಕದ ಹತ್ತಿರ ಕೈ ಹಿಡಿದು... . . . . . . . . . . . . . . . " ಸಿಸ್ಟರ್ ಬಸ್ಸು ಬಂತು ಹತ್ತಿ... ಇದು ಕೊನೆ ಬಸ್ಸು, ಯಾವ್ದೋ ಚಿಂತೇಲಿ ಇರೋ ಹಾಗಿದೆ, ಬಸ್ಸು ಮಿಸ್ಸು ಮಾಡ್ಕೋಬೇಡಿ ಬನ್ನಿ ಹತ್ತಿ" ಎಂದಾಗಲೇ ಅವಳು ವಾಸ್ತವಿಕತೆಗೆ ಮರಳಿದಳು.. ಅವಳಿಗೆ ಗೊತ್ತಾಗದ ಹಾಗೇ ಆ ಹುಡುಗನ ಕೈ ಹಿಡಿದುಕೊಂಡು ಬಸ್ಸನ್ನ್ನೇರಿದಳು..!! "ಹೊರಗೆ ಗವ್ವೆನ್ನುವ ನಡುರಾತ್ರಿ...ಅತ್ತ ನಾಯಿ ಊಳಿಡುತ್ತಿದ್ದರೆ ಇತ್ತ ಇವರನೆಲ್ಲ ಹೊತ್ತ ಬಸ್ಸು ಮೆತ್ತಗೆ ಮರೆಯಾಯ್ತು." ಇದನ್ನೆಲ್ಲಾ ಕಾಲ ಅನ್ನೋ ನಿರ್ಲಿಪ್ತ ಜಗತ್ತು ಮೌನವಾಗಿ ನೋಡುತ್ತಿತ್ತು,,!
#ಎಂ.ಆರ್. ಸಚಿನ್
ಒಟ್ಟಿಗೆ ಕುಳಿತು ಮ್ಯಾಗಿ ತಿಂತಾ ಯಾವುದೋ ಪೋಲಿ ಪಿಚ್ಚರ್ ನೋಡ್ತಾ ಕುಳಿತಿದ್ದರು. ನಂತರ ಸರದಿಯಂತೆ ಐದೂ ಜನ ಬಚ್ಚಲುಮನೆ ಕಡೆ ನಡೆದರು. ಎಲ್ಲರಲ್ಲೂ ಏನೋ ತರದ ಉದ್ವೇಗ. ಗಂಟೆ ಮಧ್ಯರಾತ್ರಿ ಒಂದು ಬಡಿದಿತ್ತು. ಸರಸರನೆ ಎಲ್ಲ ಅವರವರ ರೂಮು ಸೇರಿಕೊಂಡರು. ಸಿಕ್ಕಿದ ಜೀನ್ಸ್ ಟೀಶರ್ಟ್ ಏರಿಸಿಕೊಂಡು ಕತ್ತಿಗೆ ಟ್ಯಾಗ್ ಸಿಗಿಸಿಕೊಂಡು ಹೊರಗೆ ಗವ್ವೆನ್ನುವ ನಡುರಾತ್ರಿಯಲ್ಲಿ ಕ್ಯಾಬ್ ಹತ್ತಿ ಹೊರಟರು ಯು ಎಸ್ ಶಿಫ್ಟಿನ ಕಾಲ್ ಸೆಂಟರಿಗೆ, ಒಂದೇ ಪೀಜಿಯ ಐವರು ಯುವಕರು. ಅತ್ತ ನಾಯಿ ಗೂಳಿಡುತ್ತಿದ್ದರೆ ಇತ್ತ ಇವರು ನಾಯಿಯಂತೆ ದುಡಿಸಿಕೊಳ್ಳುವ ಕಾರ್ಪೊರೇಟ್ ಜಗತ್ತು ಸೇರಿ ಲೌಕಿಕದಿಂದ ಮರೆಯಾದರು.
#ಶಶಾಂಕ ಸೋಗಾಲ
ಒಂದೇ ಜನನಿಯ ಗರ್ಭದಿಂದ ಜನನವಾಗದಿದ್ದರೂ, ಒಂದೇ ಕೇರಿಯಲ್ಲಿ ಒಂದೇ ದಿನ, ಒಂದೇ ಘಳಿಗೆಯಲ್ಲಿ ಹುಟ್ಟಿದ್ದೆವು, ಒಂದೇ ಡೇರಿಯ ಹಾಲು ಕುಡಿದಿದ್ದೆವು, ಒಂದೇ ಷೊರೂಮಿನ ಅಂಗಿಗಳನ್ನು ತುಟ್ಟಿದ್ದೆವು, ಒಂದೇ ಬಾಲವಡಿ (ಕಿಂಡರಗಾರ್ಟನ್) ಗೆ ಸೇರಿ ಒಂದೇ ಕಟ್ಟಿಗೆಯ ಕುದುರೆಯ ಮೇಲೆ ಆಟವಾಡಿದ್ದೆವು. ಒಂದೇ ಕೋಲಿನಿಂದ ಚಿನ್ನಿ, ದಾಂಡು ಆದಿದ್ದೆವು, ಹೀಗೆ ಸರಾಗವಾಗಿ, ರಾಗವಾಗಿ ಸವೆಯುತ್ತಿದ್ದ ಜಿವನದಲ್ಲಿ, ಒಂದೇ ಮೋಟಾರಿನ ಮೇಲೆ ಸವಾರಿ ಹೊರ್ಟಾಗ,ಒಮ್ಮೇಗೆ ಅಕಸ್ಮಾತಾಗಿ ಒಂದು ಮರಕ್ಕೆ ನಮ್ಮ ಮೋಟಾರು ಬೈಕು ಡಿಕ್ಕಿ ಹೊಡೆದಾಗ .... ನನ್ನ ಸ್ನೇಹಿತನ ಪ್ರಾಣಪಕ್ಷಿ ಮಾತ್ರ ಪರಮಾತ್ಮನ ಚರಣ ಕಮಲ ಸ್ಪರ್ಷ ಮಾಡಿತ್ತು, ನನ್ನ ಪ್ರಾಣಪಕ್ಷಿ ಇನ್ನೂ ಪಾಪಿಗಳ ಲೋಕದಲ್ಲಿ, ಆ ನನ್ನ ಸ್ನೇಹಿತನ ಆನಂದಾತ್ಮಕ್ಕೆ ಶಾಂತಿಯನ್ನು ಕೋರಿ ನನ್ನ ಸೂರಿನ ಕಡೆಗೆ ಮೆಲ್ಲನೆ ಹೆಜ್ಜೆ ಇಟ್ಟಾಗ, ಹೊರಗೆ ಗವ್ವೆನ್ನುವ ನಡುರಾತ್ರಿ...ಅತ್ತ ನಾಯಿ ಊಳಿಡುತ್ತಿದ್ದರೆ ಇತ್ತ ಇವರೆಲ್ಲ ಮೆತ್ತಗೆ ಮರೆಯಾದರು...
#ಓಂ ಆನ್ ಆರ್ಟಿಸ್ಟ್
ಅವನದು ಕುಲ ಕಸಬು ಬುಡುಬುಡುಕೆ ಹೇಳೊದು. ಬಿಡಬಾರದೆಂದು ಅದನ್ನೆ ಮಾಡುತ್ತಿದ್ದನು. ಬೆಂಗಳೂರೆಂಬ ನಗರದಲ್ಲಿ ಬುಡುಬುಡುಕೆಯವನ ಮಾತು ಕೇಳೊರು ಕಡಿಮೆ. ಹಳ್ಳಿಗಳಲ್ಲಿ ಅವನಿಗೆ ಕಡಿಮೆ ಗಿಟ್ಟುತ್ತಿದ್ದರೂ ಊರೂರು ಸುತ್ತುತ್ತ ಸಣ್ಣ ಪಟ್ಟಣ ಹಳ್ಳಿಗಳಲ್ಲಿ ಕೆಲ ದಿನಗಳು ವಾಸಿಸುತ್ತಿದ್ದನು. ಮನೆ ಮಠ ಎನೂ ಇರಲಿಲ್ಲ. ಈ ಊರಲ್ಲಿ ಬಹಳ ದಿನ ಉಳಿದನು. ದಿನವಿಡಿ ಬುಡುಬುಡುಕೆ ಹೇಳಿ ಸಂಜೆ ಊರಾಚೆ ಸಿದ್ದೇಸನ ಗುಡಿ ಅಥವಾ ಜಗಲಿ ಕಟ್ಟೆ ಮೇಲೆ ಮಲಗುತ್ತಿದ್ದನು. ಅವನ ಜೊತೆಗೆ ಅವನ ನಾಯಿ ರಾಮಮಾತ್ರ ದಿನ ಮಲಗುತಿತ್ತು. ಎಂದಿನಂತೆ ದಿನವೆಲ್ಲಾ "ನಿಮಗೆಲ್ಲಾ ಶುಭವಾಗುತ್ತೆ" ಅಂತ ಬುಡುಬುಡುಕೆ ಶಾಸ್ತ್ರ ಹೇಳಿ ರಾತ್ರಿ ರಾಮನ ಜೊತೆ ಊಟ ಮಲಗಿದ್ದನು. ರಾತ್ರಿ ಸುಮಾರು ಹನ್ನೊಂದು ವರೆ ಸಮಯ. ಅವನ ಬಾಯಲ್ಲಿ ಜೊಲ್ಲು ಸುರಿಯುತಿತ್ತು. ಉಸಿರು ನಿಂತು ಹೋಗಿತ್ತು. ಬೇಲಿಯಿಂದ ಬಂದಿದ್ದ ಕರಿನಾಗ ಕಡಿದು ಹೋಗಿತ್ತು. ನಾಯಿ ರಾಮ ಇದನ್ನು ಕಂಡು ಬೊಗಳುತ್ತಿದ್ದ. ಊರೆಲ್ಲಾ ಮಲಗಿತ್ತು. ಹತ್ತಿರವಿದ್ದ ಒಂದಿಬ್ಬರು ಬಂದು ನೋಡಿದರು. ಹೊರಗೆ ಗವ್ವೆನ್ನುವ ನಡುರಾತ್ರಿ...ಅತ್ತ ನಾಯಿ ಊಳಿಡುತ್ತಿದ್ದರೆ ಇತ್ತ ಇವರೆಲ್ಲ ಮೆತ್ತಗೆ ಮರೆಯಾದರು..
#ಮಹೇಶ್ ಸಿದ್ದಲಿಂಗಪ್ಪ
ಮಹಾದಾನಿ ಎಷ್ಟೋ ಜನರ ಹೊತ್ತಿನ ಕೂಳಿಗೆ ಹೊಣೆಯಾಗಿದ್ದ. ಬಂಧು, ಬಳಗ, ಮಕ್ಕಳೆಲ್ಲರಿಗೂ ತುಂಬಾ ಬೇಕಾಗಿದ್ದ... ಒಂದು ದಿನ ಸತ್ತ... ನಾರುತ್ತಾನೆಂದು ಸಂಜೆಗೇ ಒಪ್ಪ ಮಾಡಿದರು... ಹಾಡಿ ಹೊಗಳಿದರು, ಗುಣಗಾನ ಮಾಡಿದರು ಅಳುವವರೆಲ್ಲಾ ಅತ್ತು ಕರೆದು ಗೋಳಿಟ್ಟರು... ಹೊತ್ತು ಉರುಳಿತು, ತಣಿಸಿದ್ದ ದಣಿಯ ಹೊಗಳಿ ದನಿಗೂ ದಣಿವಾಯ್ತು... ಹೊರಗೆ ಗವ್ವೆನ್ನುವ ನಡುರಾತ್ರಿ... ಅತ್ತ ನಾಯಿ ಊಳಿಡುತ್ತಿದ್ದರೆ ಇತ್ತ ಇವರೆಲ್ಲ ಮೆತ್ತಗೆ ಮರೆಯಾದರು... ನಾಳಿನ ತುತ್ತಿಗೆ ತವಡು ಕುಟ್ಟಲು! Show must go on! No one is indispensable in this world!
#ಸುರೇಶ ಶೆಟ್ಟಿ
ಆತ ತುಂಬ ಹುರುಪಿನವ. ಮದುವೆಯಾದ ಒಂದಾರು ತಿಂಗಳು ಗಂಡ ಹೆಂಡತಿ ಇಬ್ಬರೂ ಸಂತೋಷವಾಗಿದ್ದುದರನ್ನು ಜನರು ಕಂಡರೆ ವಿನಃ ನಂತರ ಅವರಲ್ಲಿ ಮೊದಲಿದ್ದ ಹುರುಪು, ಪ್ರೀತಿ, ಒಲವು ಇದ್ದಕ್ಕಿದ್ದಹಾಗೆ ಶೂನ್ಯವಾಗಿಬಿಟ್ಟಿತ್ತು. ಅವರಿಬ್ಬರೂ ಜನರೊಡನೆ ಮಾತನಾಡುವುದನ್ನು ಕಡಿಮೆ ಮಾಡಿಬಿಟ್ಟರು. ತಾವಾಯಿತು, ತಮ್ಮ ಟೈಲರಿಂಗ್ ಕೆಲಸವಾಯಿತು. ಗ್ರಾಹಕರೊಂದಿಗೆ ಎಷ್ಟು ಬೇಕೇ ಅಷ್ಟು ಮಾತನಾಡುತ್ತಿದ್ದರೆ ವಿನಃ ಒಂದು ಪದ ಹೆಚ್ಚಿಗೆ ಮಾತನಾಡಿದರೆ ಎಲ್ಲಿ ಮುತ್ತು ಉದುರುತ್ತದೋ ಎಂದು ಭಯಪಡುತ್ತಿರುವುದನ್ನು ಬಂದವರೆಲ್ಲಾ ಗಮನಿಸಿದ್ದರು. ಮೊದ ಮೊದಲು ಅವರುಗಳ ಬಗ್ಗೆ ಜನರಿಗೆ ಕುತೂಹಲವಾಯಿತು. ನಂತರ ಅವರ ಸ್ವಭಾವಕ್ಕೆ ಎಲ್ಲರೂ ಒಗ್ಗಿಕೊಂಡರು. ಹೊಸದಾಗಿ ಊರಿಗೆ ಯಾರೇ ಬಂದರೂ ಇವರ ಬಗ್ಗೆ ಆಶ್ಚರ್ಯ ಪಡುತ್ತಿದ್ದುದಂತೂ ನಿಜ. ಒಂದು ದಿನ ಹೀಗೇ ಸಾಗುತ್ತಿರುವಾಗ ಇನ್ನೂ ಇಪ್ಪತ್ತಾರು ವರ್ಷದ ಗಂಡ ಸತ್ತು ಹೋದ. ಆದರೆ, ಅವಳು ಅಳಲಿಲ್ಲ. ಇದು ಸಾಮಾನ್ಯವೆಂಬಂತೆ ಕುಂತುಬಿಟ್ಟಿದ್ದಳು. ಸಂಬಂಧಿಕರುಗಳು ಕೂಡಾ ಅಂತ್ಯಸಂಸ್ಕಾರ ಮಾಡಿ ತಮಗೇನೂ ಸಂಬಂಧವಿಲ್ಲವೆಂಬಂತೆ ತರಾ ತುರಿಯಲ್ಲಿ ಹೊರಟು ಹೋದರು. ಇವಳು ಒಂದು ರೂಮಿನಂತಹ ಚಿಕ್ಕ ಮನೆಯಲ್ಲಿ ಒಂಟಿಯಾಗಿಬಿಟ್ಟಳು. ಇವಳೇ ಅವನನ್ನು ಕೊಂದಳೆಂದು ಊರಿನ ಜನರು ತರಹೇವಾರಿ ಮಾತನಾಡಿಕೊಂಡರು. ಒಂದು ದಿನ ನಡುರಾತ್ರಿಯಲ್ಲಿ ಅವಳೊಬ್ಬಳೇ ಊರಿನ ಹೊರಗೆ ನಡೆದುಕೊಂಡು ಹೋಗುತ್ತಿರುವುದನ್ನು ಒಂದಿಬ್ಬರು ನೋಡಿ, ಊರಿನ ಜನರಿಗೆ ಸುದ್ದಿ ಮುಟ್ಟಿಸಿದರು. ಎಲ್ಲರಿಗೂ ಕುತೂಹಲ ವ್ಯಾಧಿಯಂತೆ ಉಲ್ಬಣಿಸಿ, ಒಂದಿಬ್ಬರಿಂದ ನೂರಾರು ಜನರು ಊರ ಹೊರಗೆ ಅವಳನ್ನರುಸುತ್ತಾ ಹೆಜ್ಜೆ ಹಾಕಿದರು. ಅವಳು ಊರ ಹೊರಗಿನ ಸ್ಮಶಾನದಲ್ಲಿ ಗಂಡನ ಸಮಾಧಿಯ ಮೇಲೆ ಬಿದ್ದುಕೊಂಡು ಹೊರಳಾಡುತ್ತಾ, ನೀನು ಮಾಡಿದ ತಪ್ಪಿಗೆ ನೀನು ಶಿಕ್ಷೆ ಅನುಭವಿಸಿದೆ. ನನಗೂ ಶಿಕ್ಷೆಯನ್ನು ಕೊಟ್ಟುಬಿಟ್ಟೆಯಲ್ಲಾ ಎನ್ನುತ್ತಿದ್ದಳು. ಜನರ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಎದ್ದುವು. ಅವಳು ಅಳುತ್ತಾ, ನೀನಂತೂ ಸೋಲೊಪ್ಪಿಕೊಂಡೆ, ನಾನು ನನ್ನ ಜೀವನದ ಕೊನೆಯವರೆಗೂ ಈ ಏಡ್ಸ್ ಮಹಾಮಾರಿ ವಿರುದ್ಧ ಹೋರಾಡಿ ಬದುಕುತ್ತೇನೆ. ನನ್ನ ದೇಶದ ವಿಜ್ಞಾನಿಯೊಬ್ಬ ಇದಕ್ಕೆ ಮದ್ದು ಕಂಡುಹಿಡಿದೇ ಹಿಡಿಯುತ್ತಾನೆ ಎಂದು ವಿಶ್ವಾಸದಿಂದ ಎದ್ದು ನಿಂತಳು. ಹೊರಗೆ ಗವ್ವೆನ್ನುವ ನಡುರಾತ್ರಿ...ಅತ್ತ ನಾಯಿ ಊಳಿಡುತ್ತಿದ್ದರೆ ಇತ್ತ ಇವರೆಲ್ಲ ಮೆತ್ತಗೆ ಮರೆಯಾದರು.
#ಶಿವಶಂಕರ ವಿಷ್ಣು ಯಳವತ್ತಿ
ಆ ಬಂಗಲೆಯ ಜನರೆಲ್ಲಾ ಬೃಂದಾವನಕ್ಕೆ ಹೋಗಿದ್ದಾರೆ, ತುಂಟ ಕೃಷ್ಣನ ದರುಶನಕ್ಕೆ. ಈಗ ಸಾಕು ನಾಯಿ "ರಾಜ"ನದೇ ದರ್ಬಾರು ಅವನೇ ಸರದಾರ. ರಾಜನ ಊಟ ತಿಂಡಿ ಪಕ್ಕದ ಮನೆಯಿಂದಲೇ ಬರುತ್ತಿದೆ, ತಿಂದುಂಡು ಅಡ್ಡಾಡುತ್ತಿದ್ದಾನೆ. ಪಕ್ಕದ ಮನೆಯವರು ಇಂದೇನೋ ಭಾನುವಾರದ ಬಾಡೂಟ ತಂದು ಬಡಿಸಿದ್ದಾರೆ. ಮೃಷ್ಟಾನ ಭೋಜನ ಇವತ್ತು ಈ ರಾಜನಿಗೆ. ಹೊಟ್ಟೆ ಬಿರಿಯಾ ತಿಂದು ರಾತ್ರಿ ೮ ಕ್ಕೆ ತನ್ನ ಕೋಣೆಯಲಿ ತಣ್ಣನೆ ಮಲಗಿದ್ದಾನೆ. ಅದಾಗಲೇ ಸರಿ ರಾತ್ರಿ ಹೊರಗೆಲ್ಲಾ ಗವ್ವೆನ್ನುತಿದೆ ಸುತ್ತಲೂ ನಿಶ್ಯಬ್ದದ ಕಡುಗತ್ತಲು, ಬೀದಿ ದೀಪಗಳೂ ಉರಿಯುತ್ತಿಲ್ಲ. ರಾಜ ಕಣ್ಣು ಬಿಟ್ಟು ನೋಡುತ್ತಾನೆ, ತನ್ನ ಕುತ್ತಿಗೆಗೆ ಯಾರೋ ಪಟ್ಟಿ ಜಡಿದು ಕಟ್ಟಿ ಹಾಕಿದ್ದಾರೆ. ತಟ್ಟನೆ ಎದ್ದ ರಾಜ ಗಾಬರಿಯಲಿ, ಸುತ್ತ ಕಣ್ಣಾಡಿಸುತ್ತಾನೆ ಅಲ್ಯಾರೋ ಬೆನ್ನಮೇಲೆ ಮೂಟೆಗಳನ್ನು ಹೊತ್ತು ನಾಲ್ಕೈದು ಜನ ಹೋಗುತ್ತಿದ್ದಾರೆ. ಕುತ್ತಿಗೆಯಲ್ಲಿನ ದಾರ ಬಿಚ್ಚಿ, ಓಡಿ ಅವರ ಕೈಕಾಲು ಬಗೆಯಬೇಕೆಂದು ಕೋಪದಲಿ ಎಳೆದಾಡಿದರೂ ಬಿಡಿಸಿಕೊಳ್ಳಲಾಗದ ಆ ಗಂಡು ಭದ್ರವಾಗಿದೆ. ವಿಧಿಯಿಲ್ಲ ಅರಚುತ್ತಿದ್ದಾನೇ, ಯಾರೋ ಕಾಣದವರು ಮನೆ ಸುತ್ತುವರಿದಿದ್ದಾರೆ ಏನು ಮಾಡುವುದೆಂದು ತಿಳಿಯದೇ ಊಳಿಡುತ್ತಿದ್ದಾನೆ. ಅಕ್ಕಪಕ್ಕದ ಮನೆಯವರು ಗಾಢ ನಿದ್ರೆಯಲಿ ಕನಸು ಕಾಣುತ್ತಿದ್ದಾರೆ. ಇತ್ತ ಬಂದವರೆಲ್ಲ ಮೆಲ್ಲಗೆ ಮರೆಯಾದರು. ರಾಜ ಮಾತ್ರ ಬಾಡೂಟ ಕೊಟ್ಟವನನ್ನೇ ಅನುಮಾನಿಸುತ್ತ ಹಲ್ಲು ಮಸೆಯುತ್ತಿದ್ದಾನೆ
#ಸುಗುಣಾ ಮಹೇಶ್
ಅಂದು ನನ್ನ ಜೀವನದ ಅತ್ಯಂತ ಸಂತೋಷದ ದಿನ.ಕ್ಯಾನ್ಸರ್ ಎಂಬ ಮಹಾಮಾರಿಗೆ ಔಷಧಿ ಕಂಡುಹಿಡಿಯ ಬೇಕೆಂಬ ಆಸೆ ಅಂದು ಈಡೇರಿತ್ತು.ಐದು ವರ್ಷದ ಸಂಶೋಧನೆ ಫಲ ಕೊಟ್ಟಿತ್ತು. ಆನಂದದಲ್ಲಿ ತೇಲಾಡುತ್ತಿದ್ದ ನನ್ನನ್ನು ಗಡಿಯಾರ ತನ್ನ ಶಬ್ದದಿಂದ 11 ಘಂಟೆ ಆಯ್ತೆಂದು ಎಚ್ಚರಿಸಿತ್ತು. ನಡುರಾತ್ರಿ ಮನೆ ಸೇರುವುದು ನನಗೆ ಹೋಸದೇನು ಅಲ್ಲ. ಆದರೂ ಇಂದು ಅಮ್ಮನಿಗೆ ನನ್ನ ಸಾಧನೆ ಹೇಳುವ ತವಕ. ಕೂಗಳತೆ ದೂರದಲ್ಲಿರುವ ಮನೆಯೂ ಕಿಲೋಮಿಟರ್ ದೂರದಲ್ಲಿರುವಂತೆ ಭಾಸವಾಗುತ್ತಿತ್ತು. ಸರ ಸರನೆ ಹೆಜ್ಜೆ ಹಾಕುತ್ತಿದ್ದ ನನ್ನ ಐದಾರು ಕೈಗಳು ಸರಕ್ಕನೆ ಎಳೆದುಕೊಂಡದ್ದಷ್ಟೇ ನೆನಪು. ಕಣ್ಣು ಬಿಟ್ಟಾಗ ನಡುರಾತ್ರಿಯ ಗವ್ವೆನ್ನುವ ಕತ್ತಲಲ್ಲಿ ನಾಯಿಗಳು ಊಳಿಡುತ್ತಿದ್ದರೆ ನನ್ನ ದೇಹವನ್ನು ಮುಕ್ಕಿದ ಇವರುಗಳು ಮೆತ್ತಗೆ ಮರೆಯಾದರು.
#ಅನುಶಾ ಎಂ ಹೆಗಡೆ
ಊರಿನಲ್ಲಿ ಚೌಡಿಕಾಟ ಎಂಬ ಸುದ್ದಿ ಬಹಳ ದಿನದಿಂದ ಹಬ್ಬಿತ್ತು. ಅದೇ ಕಾರಣದಿಂದ ಅಲ್ಲಿ ಖಾಲಿ ಬಿದ್ದಿದ್ದ ಅಡಿಕೆತೋಟವನ್ನು ಖರೀದಿಸಲು ಯಾರೂ ಮುಂದೆಬರುತ್ತಿರಲಿಲ್ಲ...ಒಮ್ಮೊಮ್ಮೆ ಯಾರಾದರು ಖರೀದಿಗೆ ಬಂದು ಹೋಟೇಲಿಗೆಲ್ಲ ಗತಿಯಿರದ ಊರಲ್ಲೇ ಯಾರದಾದರೂ ಮನೆಯಲ್ಲಿ ರಾತ್ರಿ ಉಳಿದುಕೊಂಡರೆ ಆ ಮನೆಗೆ ಚೌಡಿ ಕಲ್ಲೆಸೆಯುವುದು ಸಾಮಾನ್ಯವಾಗಿತ್ತು...ಇದನ್ನು ಮನಗಂಡ ಕಾಲೇಜು ಪೋರನೊಬ್ಬನು ಪೂರ್ಣಿಮೆಯ ದಿನ ಇಂತದೇ ಗಿರಾಕಿಯ ಉಳಿಯುವಿಕೆಯ ಸೂಟು ಸಿಕ್ಕಿ ಅವನು ಆಶ್ರಯಿಸಿದ ಮನೆಯ ಹತ್ತಿರದ ದಿಬ್ಬದಲ್ಲಿ ಅಡಗಿಕೂತನು...ಸುಮಾರು ಹನ್ನೆರಡು ಗಂಟೆ...ಊರಿನ ಪ್ರಮುಖರ ಮಗನೇ ಇನ್ನೆರಡು ಹುಡುಗರನ್ನು ಕಟ್ಟಿಕೊಂಡು ಚಿಟಿಬಿಲ್ಲಿನಿಂದ ಕಲ್ಲೆಸೆಯುತ್ತಿದ್ದಾನೆ!!! ...."ಏಯ್ ಯಾರ್ರ್ ಅದು" ಎಂದು ಹೇಳಲು ಅವರೆಲ್ಲ ಮೆತ್ತಗೆ ಮರೆಯಾದರು...ಕೆಳಮನೆಯ ಕೇರಿಯಲ್ಲೇಲೋ ನಾಯಿ ಹೀಟು ಹೆಚ್ಚಾಗಿ ಊಳಿಡುತ್ತಿತ್ತು...
#ಚಿನ್ಮಯ ಭಟ್ಟ
ಆಗ ನಾನು ಚಿಕ್ಕೋನಿದ್ದೆ. ಚಿಕ್ಕೋನು ಅಂದ್ರೆ ತುಂಬಾ ಚಿಕ್ಕೋನಲ್ಲ, ಅಪ್ಪ ಚಾಕಲೇಟ್ ತಂದ್ರೆ ಚಿಕ್ಕೋನು, ಓರಿಗೆಯೋರ ಜೊತೆ ಟೂರ್ನಮೆಂಟ್ ತಿರುಗೋವಾಗ ದೊಡ್ಡೋನು. ಹಿಂಗೇ ತಿರುಗಾಟ ಜೋರಾಗಿ ಜೊತೆಗಾರರು ಜಾಸ್ತಿಯಾಗಿದ್ರು. ಎಲ್ರೂ ಒಳ್ಳೆಯೋರೇ ಸಿಗ್ತಾರ್ಯೆ? ನಂಗೂ ಒಂದಿಬ್ರು ಒಂಥರಾ ಪ್ರೆಂಡ್ಸಿದ್ರು ಬಿಡಿ. ಜಾಸ್ತಿ ಕೆಟ್ಟೋರು ಅನ್ನೋಕೆ ಅವ್ರು ನನ್ ಪ್ರೆಂಡ್ಸು ಅನ್ನೋದು ಅಡ್ಡಿಯಾಗತ್ತೆ. ಅವರ ಜೊತೆ ಸೇರೋ ಏನೋ ನಂಗೆ ಈ ಗುಟ್ಕಾ ತಿನ್ನೋ ಚಟ ಅಂಟಿಬಿಡ್ತು ನೋಡಿ. ಅದು ಹೆಂಗೋ ಮನೆಯವರಿಗೆ ಗೊತ್ತಾಗೋಯ್ತು ದಿನಾ ಅಪ್ಪ ಕೊಡ್ತಿದ್ದ ಹತ್ತು ರೂಪಾಯಿಗೂ ಕತ್ತರಿ ಬಿತ್ತು. ನನ್ ಗೆಳೆಯರು ಒಳ್ಳೇಯವ್ರು ಅಂತನ್ಸಿದ್ದು ಅದೇ ಟೈಮಲ್ಲಿ. ನನ್ ಪರಿಸ್ಥಿತಿ ನೋಡೋಕಾಗ್ದೇ ಮನೆಯಿಂದ ದಿನಾ ಒಂಚೂರು ಅಡಿಕೆ ತಗೊಂಡು ಬಾ ದುಡ್ಡು ಸಿಗತ್ತೆ ಅಂತ ಒಳ್ಳೇ ಐಡಿಯಾ ಕೊಟ್ರು. ಆ ಐಡಿಯಾ ಎಷ್ಟು ಚೆನ್ನಾಗಿತ್ತು ಅಂದ್ರೆ ನಂಗೆ ಸಾಕಾಗೋವಷ್ಟು ಗುಟ್ಖಾ ತಗೊಂಡ್ರೂ ತುಂಬಾ ದುಡ್ಡು ಉಳೀತಿತ್ತು. ಆವತ್ತೊಂದಿನ ರಾತ್ರಿ ಅಟ್ಟ ಹತ್ತಿದ್ದೆ, ಕೋಣೆಯಲ್ಲಿ ಅಪ್ಪ ತೀರಿಸಲಾಗದ ಸಾಲದ ಬಗ್ಗೆ ಮಾತಾಡ್ತಿದ್ರು, ಈ ಬಾರಿ ಚಾಲಿ ತೂಕವೇ ಇಲ್ಲ ಸಾಲ ಕಟಬಾಕಿಯಾಗಿದೆ ಅನ್ನೋವಾಗ ದನಿ ನಡುಗುತ್ತಿತ್ತು. ಹೊರಗೆ ಗವ್ವೆನ್ನೋ ಕತ್ತಲೆ, ಅದೆಲ್ಲೋ ನಾಯಿಗಳು ಕೂಗುತ್ತಿದ್ರೆ ಅಪ್ಪ ಅಮ್ಮನ ದನಿ ಮರೆಯಾಗಿತ್ತು. ನಂಗೆ ನಡುರಾತ್ರಿಯಲ್ಲಿ ಜ್ಞಾನೋದಯ. ಮುಂದೆ ಗುಟ್ಖಾ ಬಿಟ್ಟು ಅಪ್ಪನತ್ರ ನನಗಾಗಿ ಚಾಕಲೇಟ್ ತರೋದೂ ಬೇಡ ಅಂದೆ...
#ಶರತ್ ಹೆಗಡೆ

ಸೋಮವಾರ, ಡಿಸೆಂಬರ್ 29, 2014

ಪ್ರಯತ್ನ-೬


ಕುಡಿ:"ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು."

1999 ಡಿಸೆಂಬರ್ ಸಮಯ.. ಕೊರೆಯುವ ಛಳಿ ಬೇರೆ. ಆದರೂ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಬಿಸಿಯ ವಾತಾವರಣ.. ಯುದ್ಧ ಬೀತಿ. ಅಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾದಂತಹ ಕಾಲವದು. ಕಾರ್ಗಿಲ್ ಜನವಸತಿಯ ಸ್ವಾಬಿ ಹಳ್ಳಿಯನ್ನು ಪಾಕಿಸ್ತಾನಿ ಪಡೆಗಳಿಂದ ಭಾರತೀಯ ಸೇನಾಪಡೆಗಳು ತಮ್ಮ ವಶಕ್ಕೆ ಪಡೆದು ಅಲ್ಲಿ ತಿರಂಗಾ ಧ್ವಜವನ್ನು ಹಾರಿಸಿದ್ದವು. ಅಲ್ಲಿನ ಜನರೂ ಪಾಕಿಗಳ ದುರ್ನಡತೆಗೆ ಬೇಸತ್ತು ಭಾರತೀಯರ ಪಾಲಾದ ಬಗ್ಗೆ ಖುಷಿಪಡುತ್ತಿದ್ದರು. ಅಂತಹ ಸಮಯದಲ್ಲಿ ಭಾರತೀಯ ಸೇನಾ ತುಕಡಿಯ ದಲ್ಜೀರ್ ಸಿಂಗ್ ಗೂ ಪಾಕಿಸ್ತಾನಿ ತರುಣಿ ನಾಜಿಯಾಗೂ ಅದ್ಹೇಗೋ ಪ್ರೇಮಾಂಕುರವಾಯ್ತು. ಅವರ ಗಾಢ ಪ್ರೇಮಕ್ಕೆ ಆಗ ದೇಶ, ಜಾತಿ, ಜನ, ಸಮುದಾಯ ಯಾವುದೂ ಅಡ್ಡ ಬರದೆ ಎಲ್ಲವೂ ಸುಖಾಂತ್ಯವಾಗುವಂತಿತ್ತು. ಇನ್ನೆನು ಮದುವೆಯಾಗಬೇಕು ಅನ್ನುವ ಸಮಯಕ್ಕೆ ಸರಿಯಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ರಾಜಕೀಯ ಬೆಳವಣಿಗೆ ಹೊಂದಿ ಪರಸ್ಪರ ರಾಜಿ ಸಂಧಾನವಾಗಿ ಭಾರತೀಯ ಸೇನೆಯವರು ವಾಪಾಸ್ ಹೊರಡಲು ಆಜ್ಞೆಯಾಗಿತ್ತು. ದಲ್ಜೀರ್ ಸಿಂಗ್ ಗೆ ನಾಜಿಯಾ ಬಿಟ್ಟು ಹೊರಡಲು ಕಷ್ಟವಾದರೂ ಕರ್ತವ್ಯದ ಮೇರೆಗೆ ಆದಷ್ಟು ಬೇಗ ಅವಳನ್ನು ತನ್ನ ಬಳಿ ಕರೆಸಿಕೊಳ್ಳುತ್ತೇನೆಂದು ಮತ್ತು ಭಾರತ ಪಾಕಿಸ್ತಾನದ ನಡುವೆ ಸ್ನೇಹಪರ ಸಂಭಂಧ ಏರ್ಪಟ್ಟಿದೆಯೆಂದು ತಿಳಿದು ಖುಷಿಯಿಂದ ಭಾರತಕ್ಕೆ ಹೊರಡಲು ಸಿದ್ಧನಾದನು. ಇಂದಿಗೆ 15 ವರ್ಷವಾಯಿತು. ಇವತ್ತಿಗೂ ಅವನಿಗೆ ನಾಜಿಯಾ ನೋಡಲು, ಭೇಟಿಮಾಡಲು ಅವಕಾಶವಾಗಲಿಲ್ಲ. ಎರಡೂ ದೇಶದವರೂ ಅವನಿಂದ ಅವಕಾಶವನ್ನು ಕಸಿದುಕೊಂಡರು. ಅವಳನ್ನು ನೋಡಿದ ಕೊನೇಬಾರಿ ನಾಜಿಯಾ "ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು............." ಇವತ್ತಿಗೂ ಅವನು ಅವಳ ಪ್ರೇಮದಲ್ಲಿಯೇ ಅರೆ ಹುಚ್ಚನಾಗಿ ನಿಮ್ಯಾನ್ಸ್ ಕೊಠಡಿಯಲ್ಲಿ ತಾನೊಬ್ಬ ಯೋಧ ಎಂಬುದೂ ಮರೆತು ತನ್ನದೇ ಲಹರಿಯಲ್ಲಿ ಸುಖವಾಗಿದ್ದಾನೆ.
#ಎಂ.ಆರ್. ಸಚಿನ್
ಚಂದನಾ ಅಪ್ಪ ಅಮ್ಮನ ಒಬ್ಬಳೇ ಮಗಳು. ಹೆಸರಿಗೆ ತಕ್ಕಂತೆ ಸುಂದರಿ. ದಿನದ ಹೆಚ್ಚಿನ ಸಮಯವನ್ನು ಗೆಳತಿಯರೊಂದಿಗೆ ಕಳೀತಿದ್ಲು. ಮನಸಲ್ಲಿರೋ ರಾಜಕುಮಾರಂಗೆ ದಿನಕ್ಕೊಂದು ಬಣ್ಣಹಚ್ತಾ ಕನಸ್ ಕಾಣ್ತಿದ್ಲು. ಆ ದಿನ ಅವಳ ತಂದೆ ತಾಯಿ ಬೆಳಗ್ ಬೆಳಗ್ಗೆನೆ ಎಲ್ಲಿಗೊ ಹೊರ್ಟಿದ್ರು. ಇವ್ಳೂ ಇವ್ಳ ಪಾಡಿಗೆ ಕಾಲೇಜಿಗೆ ಹೋದ್ಲು. ಸಂಜೆ ಮನೆಗೆ ಬಂದ್ರೆ ಮನೆತುಂಬಾ ಜನ. ಮರುದಿನ ಅವಳ ಮದುವೆ! ಕಣ್ಣೀರು ಕಣ್ಣಿಂದ ಇಳಿಲಿಕ್ಕು ಸಮಯ ಇರಲಿಲ್ಲ. ಅದನ್ ವಿಚಾರಿಸೊ ಗೋಜಿಗೆ ಯಾರೂ ಹೋಗಲಿಲ್ಲ. ಅವಸರದ ಮದುವೆ ನಡೆದೇ ಹೋಯಿತು.ಕಾರಣ! ಗೊತ್ತಿಲ್ಲ. ಎಲ್ಲರ ಗುಸುಗುಸು ಮಾತ್ರ ಅವಳಿಗೆ ಅರ್ಥವೇ ಆಗಲಿಲ್ಲ. ಮನೆಯವರೊಪ್ಪಿದ ಮನವೊಪ್ಪದ ಗಂಡನೊಂದಿಗೆ ಅವಳು ನಿರ್ಭಾವಕತೆಯಿಂದ ಹೊರಟಳು. ತಂದೆತಾಯಿ ಸಮಾಧಾನದಿಂದ ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ ಬಸ್ಸು ಮೆಲ್ಲನೆ ಸಾಗುತ್ತಿತ್ತು....
#ಪ್ರಗತಿ ದಿಲೀಪ್
ಆಕೆ ರಸ್ತೆಯಂಚಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ .. ಬಸ್ ಮೆಲ್ಲನೆ ಮುಂದೆ ಸರಿಯುತ್ತಿತ್ತು. "ಥತ್ ಇವಳದ್ದು ಯಾವಾಗಲೂ ಇದೇ ಗೋಳು" ಎಂದು ಕಂಡಕ್ಟರ್ ಗೊಣಗಿದ. "ಏನಾಗಿದೆ ಅವಳಿಗೆ" ಎಂದರು ಬಸ್ಸಲ್ಲಿದ್ದ ಹಿರಿಯರೊಬ್ಬರು. "ಎಂಟು ವರ್ಷದ ಹಿಂದೆ ಹೀಗೆ ಟಾಟ ಮಾಡಿ ಕಳಿಸಿಕೊಟ್ಟ ಇವಳ ಮಗಳೊಬ್ಬಳು ಯಾವನದೋ ಜೊತೆ ಓಡಿ ಹೋದಳಂತೆ. ತಂದೆ ಸಂಬಂಧ ಕಳೆದುಕೊಂಡು ನಿರಾಳವಾದರು. ಆದರೆ ತಾಯಿ ಕರುಳು ನೋಡಿ ಇನ್ನು ಕಾಯುತ್ತಿದೆ.ಮಗಳು ಬರುತ್ತಾಳೇನೋ ಅಂತ, ಹೀಗೆ ಕೈ ಬೀಸುತ್ತಾ... " ಎಂದವನು ಟಿಕೆಟ್ ಗಾಗಿ ಮುಂದೆ ಹೋದ. ಹಿರಿಯರ ಪಕ್ಕ ಕುಳಿತ ಆವಂತಿಗೆ ಮತ್ತೊಮ್ಮೆ ತಿರುಗಿ ಅಮ್ಮನ ಮುಖ ನೋಡಬೇಕೆನಿಸಿತ್ತು
#ಸಂಧ್ಯಾ ಭಟ್ಟ
ಮಲೆನಾಡಿನ ಕುಗ್ರಾಮ ಸಂಪಿಗೇಪುರದಲ್ಲಿ ಇರುವುದೊಂದೇ ಮನೆ... ಮಡದಿ ತೀರಿಕೊಂಡು ವರ್ಷಗಳೇ ಕಳೆದಿದ್ದವು.. ಇದ್ದ ಒಬ್ಬನೇ ಮಗ ಉದ್ಯೋಗ ನಿಮಿತ್ತ ಶಹರ ಸೇರಿದ್ದ... ಕಾಲದ ಹಂಗಿಲ್ಲದೇ ಮನೆಯಿಂದ ಐದು ಮೈಲಿ ದೂರದ ರಸ್ತೆಗೆ ಬೆಳಗಿನ ಜಾವ ಐದು ಗಂಟೆಗೇ ಬಂದು ಆರರ ಆಸುಪಾಸು ಹಾದುಹೋಗುವ ಬಸ್ಸಿಗೆ ಕಾಯುವುದು ಭಟ್ಟರ ದಿನ ನಿತ್ಯದ ಅಭ್ಯಾಸ... ಶಹರದಿಂದ ಆಗಾಗ ಮಗ ಕಳಿಸುವ ಪತ್ರವನ್ನೋ ಏನಾದರೂ ಉಪಯುಕ್ತ ವಸ್ತುವನ್ನೋ ಬಸ್ ನಿರ್ವಾಹಕನಿಂದ ಪಡೆದು ಆನಂದಿಸುವುದು ಅದರ ಹಿಂದಿನ ಉದ್ದೇಶ... ಆದರೆ ಮಗನ ಕಡೆಯಿಂದ ಯಾವುದೇ ಪತ್ರವಾಗಲೀ, ವಸ್ತುವಾಗಲೀ ಬಾರದೇ ಮೂರು ತಿಂಗಳು ಕಳೆದಿದ್ದವು... ಇಂದು ಕೂಡ ಬಸ್ಸು ಬಂದ ತಕ್ಷಣ ಭಟ್ಟರು ಜೋರಾಗಿ ಕೈ ಬೀಸುತ್ತಿದ್ದರೆ ಬಸ್ಸು ನಿಲ್ಲದೇ ನಿದಾನವಾಗಿ ಸಾಗಿ ಹೋಯ್ತು.. ಎಂದಿನಂತೆ ನಿರ್ವಾಹಕ ಕೈ ಹೊರಚಾಚಿ ಏನೂ ಇಲ್ಲ ಎನ್ನುವ ಸನ್ನೆ ಮಾಡಿ ಬಸ್ಸಿನ ಒಂದು ಮೂಲೆಯಲ್ಲಿ ಇಟ್ಟಿದ್ದ ಟ್ರಂಕಿನತ್ತ ಕಣ್ಣು ಹರಿಸಿದ.. ಕೆಲಸದ ನಿಮಿತ್ತ ಹೊರದೇಶಕ್ಕೆ ಹೊರಟಿದ್ದ ಭಟ್ಟರ ಮಗನಿದ್ದ ವಿಮಾನ ಪತನವಾಗಿದ್ದು.. ವಿಮಾನದಲ್ಲಿದ್ದ ಎಲ್ಲರೂ ಮ್ರತದೇಹವೂ ಸಿಗದಂತೆ ಸುಟ್ಟು ಬೂದಿಯಾಗಿದ್ದು... ಅವನ ಸ್ನೇಹಿತನೊಬ್ಬ ಅವನಿಗೆ ಸೇರಿದ್ದ ವಸ್ತುವನ್ನೆಲ್ಲ ಟ್ರಂಕಿನಲ್ಲಿ ತುಂಬಿ ಭಟ್ಟರಿಗೆ ಸುದ್ದಿ ಮುಟ್ಟಿಸಲು ಹೇಳಿದ್ದು ಎಲ್ಲ ಕಣ್ಣ ಮುಂದೆ ಹಾದು ಕಣ್ಣು ತೇವವಾಯ್ತು.. ಏನು ಮಾಡುವುದು.. ಹೇಗೆ ಹೇಳುವುದು ತಿಳಿಯದೇ "ರೈಟ್ ರೈಟ್" ಅಂತ ಒಮ್ಮೆ ಕೂಗಿದ...
#ದಿಲೀಪ ಹೆಗಡೆ
ಈ ಘಟನೆಗೆ ಸುಮಾರು ಹತ್ತು ವರ್ಷ ಕಳೆದಿರಬಹುದು. ಅಂದು ಆಕೆ ನನ್ನ ಬಿಟ್ಟು ಹೊರಟಿದ್ದಳು, ಶಾಶ್ವತವಾಗಿ. ನಮ್ಮ ಐದು ವರ್ಷದ ಪ್ರೀತಿಗೆ ಎಳ್ಳು ನೀರು ಬಿಟ್ಟು ಹೋಗಲು ಅವಳಿಗೆ ಮನಸ್ಸಾದರೂ ಹೇಗೆ ಬಂತು ಅನ್ನುವುದೇ ತಿಳಿಯಲಿಲ್ಲ. ಮನಸ್ಸು ಭಾರವಾಗಿತ್ತು, ಕಣ್ಣುಗಳು ತುಂಬಿ ಬಂದಿತ್ತು. ಅಂದು ಆಕೆ ನನ್ನನ್ನು ಕೊನೆಯ ಬಾರಿಗೆ ಸಿಕ್ಕು ಇನ್ನೆಂದಿಗೂ ಮತ್ತೆ ಸಿಗದಿರು ಅಂತ ಬಸ್ಸೇರಿ ಹೊರಟಿದ್ದಳು. ಬಸ್ಸು ಮೆಲ್ಲನೆ ಸಾಗತೊಡಗಿತ್ತು, ಪಕ್ಕನೆ ಅದೇನೋ ಹೊಳೆದಂತೆ ರಸ್ತೆಯಂಚಿನಿಂದ ನಾ ಕೈ ಬೀಸತೊಡಗಿದ್ದೆ. ಕೆಲ ಕ್ಷಣದಲ್ಲೇ ಬಸ್ಸು, ಅವಳು ಇಬ್ಬರೂ ಕಣ್ಮರೆಯಾಗಿದ್ದರು. ಅವಳಿಗಾಗಿ ತಂದಿದ್ದ ಕಾಲ್ಗೆಜ್ಜೆ ನನ್ನ ನಡಿಗೆಯೊಂದಿಗೆ ಜೇಬಿನಲ್ಲಿ ತಾಳಹಾಕುತ್ತಿತ್ತು
#ಗಣೇಶ ಖರೆ

ರಮೇಶಣ್ಣಾ ಚೂರು ಬೇಗ್ ಕೊಡಿ, ಇಂದಂಗೆ ವಾರಾ ಆಯ್ತು ಡೈಲಿ ಲೇಟಾಗ್ತಿದೆ, ನಿಮ್ ಇಡ್ಲಿ, ಬನ್ಸ್ ರುಚಿಗೆ ಸಖತ್ ಪ್ಲ್ಯಾಟ್ ಆಗದೆ ಬಾಯಿ, ನಿನ್ನೇನೇ ಗುರ್ ಅಂತಿದ್ದಾ..ಜಿಕ್ರಿ, ಮೊದ್ಲೇ ಆ ಮುಲ್ಲಂಗೆ ನನ್ ಕಂಡ್ರೆ ಆಗದಿಲ್ಲ, ಇವತ್ತೂ ಲೇಟಾದ್ರೆ ನಿಲ್ಸದಿಲ್ಲ ಅಂದಿದ್ದ ...ಏನ್ ಅರ್ಜಂಟಿರತ್ತೋ ಬಡ್ಡಿಮಕ್ಳಿಗೆ,.. ಬೆಳಿಗ್ಗೆ ಎಂಟರ ಬಸ್ಸಿಗೇ ಹೋಗಬೇಕಾದ ಅನಿವಾರ್ಯ ಹೊಂದಿದ್ದ ನಟ್ರಾಜ ..ರಾಮಭವನದಲ್ಲಿ ಜೋರಾಗಿಯೇ ಪಟ್ಟಂಗ ಶುರುವಿಟ್ಟಿದ್ದ, ಪೇಟೇಲಿ ರೇಟು ಜಾಸ್ತಿ ಎಂಬ ಕಾರಣಕ್ಕೆ ಅವನ ಬೆಳಗಿನ ಬ್ಯಾಟಿಂಗು ಇಲ್ಲೇ ಆಗಬೇಕಿತ್ತು..ಇವನ ಈ ತಿಂಡಿ ಮುಗಿದು ಹೊರಡುವಷ್ಟರಲ್ಲಿಯೇ ಬಸ್ಸು ನೂರಿನ್ನೂರು ಮೀಟರ್ ಹೋಗಿ,.ಆಮೇಲ್ಯಾರೋ ಇಂವ ಓಡೋದ್ನೋಡಿ ನಿಲ್ಸೋರು..ಇಂವ ಆರಾಮ ತಿಂದು ಬರೋದ ನೋಡಿದ್ರೆ ಡ್ರೈವರ್ ಜಿಕ್ರಿಗೆ ಉರಿ.. ಇವತ್ತು ಏನಾರಾ ಮಾಡಿ ಬಸ್ ಹಿಡೀಬೇಕು ಎಂದು ಹಠತೊಟ್ಟೇ ಎಂಟು ಗಂಟೆಗೆ ಐದು ನಿಮಿಷ ಮೊದಲೇ ಬಂದು ತಿಂಡಿ ತಿಂದು ಅರ್ಧ ಪಟ್ಟಂಗವಾಗುವಷ್ಟರಲ್ಲಿಯೇ ಬಸ್ ಹಾರ್ನ ಕೇಳಿ ಕಸಿವಿಸಿಯಾದ ನಟ್ರಾಜು ಅರ್ಧಕ್ಕೇ ಕೈ ತೊಳೆದು ಬ್ಯಾಗೇರಿಸಿ ಕೈ ಬೀಸಿದರೂ, ತನಗೇನೂ ಗೊತ್ತೇ ಇಲ್ಲವೆಂದು ಬಸ್ಸು ಮಾಮೂಲಿ ವೇಗದಲ್ಲಿ ಚಲಿಸತೊಡಗಿತು... ಎಡಗನ್ನಡಿಯಲ್ಲಿ ನಟ್ರಾಜನ ಸಪ್ಪೆ ಮುಖ ನೋಡಿ ಜಿಕ್ರಿಯ ನಗು ಬಸ್ಸಿನ ಸೌಂಡಿನಲ್ಲಿ ಲೀನವಾಗತೊಡಗಿತು.. ಬಡ್ಡಿಮಗ, ಕೈ ಬೀಸ್ತಾ ಇದ್ದೆ ಬಸ್ಸು ಹೋಗ್ತಾ ಇತ್ತು.!! .ಮಾಡ್ತೀನಿ ಮುಲ್ಲಂಗೆ.ಎನ್ನುತ್ತಾ..ಮುಂದೆ ಯಾವುದೋ ಟ್ರಕ್ಕಿಗೆ ಜೋತು, ಬ್ಯಾಂಕಿಗೆ ನಡೆದ ನಟ್ರಾಜು ...ಪಲಕದ ಮೇಲೆ 'ವೆಹಿಕಲ್ ಲೋನಿನ' ಡೀಟೇಲ್ಸುಗಳ ಹುಡುಕತೊಡಗಿದ.....
#ಬಾಲಚಂದ್ರ ಭಟ್ಟ
ನನ್ನದು ಅವಳದು ೫ ವರ್ಷಗಳ ಪ್ರೀತಿ, ಅದ್ಯಾವ ಕಾರಣಕ್ಕೋ ಇಬ್ಬರ ಒಡನಾಟ ಒಮ್ಮೆಲೆ ತಟಸ್ಥವಾಗಿಬಿಟ್ಟಿತು. ಅವಳೊಂದಿಗಿನ ಮಾತು, ಮುನಿಸು, ಪ್ರೀತಿ ಯಾವುದಕ್ಕೂ ಜಾಗವಿಲ್ಲದಷ್ಟು ದೂರ ಸರಿದುಬಿಟ್ಟಳು. ಹೋಗುವುದಾದರೆ ಹೋಗು ಕಾರಣವೇನು ಎಂದು ಹೇಳಿ ಹೋಗು ಎಂದು ಎಷ್ಟು ಬಾರಿ ನನ್ನೊಳಗೆ ನನ್ನನ್ನೇ ಕೇಳಿಕೊಂಡಿದ್ದೆ. ಕಾರಣ ಹೇಳುವವಳು ಸಿಕ್ಕರೆ ತಾನೆ ಉತ್ತರಿಸಲು. ಇಂದು ಬಸ್ ಸ್ಟಾಪಿನಲಿ ನಿಂತಿದ್ದೆ, ಬಸ್ಸಿನ ಕಿಟಕಿಯಲಿ ಅವಳ ನೀಳಗೂದಲು ಕಾಣುತ್ತಿದ್ದಂತೆ ಎಚ್ಚೆತ್ತುಕೊಂಡೆ, ಕೈಬೀಸಿ ಕರೆದೆ ಆದರೂ ಬಸ್ ಮುಂದೆ ಸಾಗುತ್ತಿದೆ.... ದೂರಕ್ಕೆ ಸಾಗಿದೆ ರಸ್ತೆಯಂಚಿನಲೇ ನಿಂತು ಜೋರು ಕೈಬೀಸಿ ಕರೆಯುತ್ತಿದ್ದೇನೆ, ಅವಳೂ ತಿರುಗಿ ನೋಡಲಿಲ್ಲ ಇತ್ತ ಡ್ರೈವರ್ ಕೂಡ ಬಸ್ ನಿಲ್ಲಿಸಲಿಲ್ಲ ಹಾಗೇ ಮೆಲ್ಲನೆ ಸಾಗುತ್ತಿರುವ ಬಸ್ ನನ್ನೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕಲು ಬಿಡಲೇ ಇಲ್ಲ.
#ಸುಗುಣಾ ಮಹೇಶ್
ಬೆಳಕಿನ ಗತಿಯಲ್ಲಿ ಕಾಲ ಚಲಿಸೋವಾಗ ಕಿಟಕಿಯಿಂದ ತಲೆ ಹೊರ ಹಾಕಿ ನೋಡಿದೆ. ಹೊರಗೆ ನನ್ನದೇ ರೂಪಿನ ವ್ಯಕ್ತಿಗಳು ನಿಂತಿದ್ದರು. ಶೈಶವ್ಯದ ನಾನುಗಳೂ, ಬಾಲ್ಯ, ಯೌವನದ ನಾನುಗಳೂ ನನ್ನ ಗುರುತೇ ಇರದಂತೆ ನನ್ನನ್ನೇ ದಿಟ್ಟಿಸುತ್ತಿದ್ದರು! ನೆನಪಿಲ್ಲ, ಆ ನಾನುಗಳ ಕಣ್ಣಲ್ಲಿದ್ದ ಖುಷಿ ಈಗಿನ ನನ್ನಲ್ಲಿ ಮೊದಲೆಂದೂ ಇದ್ದ ನೆನಪಿಲ್ಲ. ನನಗೇನೂ ಆ ಖುಷಿಯ ಆಸೆಯಿಲ್ಲವೆಂದಲ್ಲ, ಆ ನಾನುಗಳ ಖುಷಿ ನನ್ನ ಹೊಟ್ಟೆ ಉರಿಸುತ್ತಿಲ್ಲವೆಂದೂ ಅಲ್ಲ. ಈ ನಾನೆಂಬ ಪ್ರಬುದ್ದನಿಗೆ ಕಾಲದ ಲೆಕ್ಕಾಚಾರದಲ್ಲಿ ಕೂಡಿಸುವುದಿದೆ ಹೊರತು ಕಳೆಯುವುದಿಲ್ಲ ಎಂಬ ಜ್ಞಾನವಿದೆ. ಈಗಿನ ನನಗೆ ಆಮಿಷಗಳಿವೆ, ಜವಾಬ್ದಾರಿಗಳೆಂಬ ನೆಪಗಳಿವೆ. ಹೊರಗಿಂದ ನನ್ನವೇ ನಾನುಗಳು ಕೈಬೀಸಿ ಟಾಟಾ ಮಾಡ್ತಿದ್ರೆ ಕಾಲನ ಬಸ್ಸು ವೇಗವಾಗಿ ಚಲಿಸುತ್ತಿತ್ತು... ಹೊಟ್ಟೆಯುರಿ ಹೆಚ್ಚಾಗಿ ಕಿಟಕಿಗಳನ್ನು ಮುಚ್ಚಿದೆ. ಕಾಲ ನಿಂತಂತಾಯ್ತು...
#ಶರತ್ ಹೆಗಡೆ
ನಮ್ಮ ಹಾಡಿಯಂತಹ ಹಳ್ಳಿಯಲ್ಲಿ ಹೈಸ್ಕೂಲ್ ಇರಲಿಲ್ಲ ನಮ್ಮ ತಂದೆ ಶಾಲೆ ಮಾಸ್ತರರು... ಅವರ ಉತ್ತೇಜನದ ಫಲವಾಗಿ ಅಜ್ಜಿ ಮತ್ತು ಅಮ್ಮನ ವಿರೋಧವಿದ್ದರೂ ಹಳ್ಳಿಯಿಂದ ಮೊದಲ ಹೆಣ್ಣು ಮಗಳಾಗಿ ಒಂದಷ್ಟು ಓದಿ ಹೈಸ್ಕೂಲ್ ಹತ್ತಿಯೇ ಬಿಟ್ಟೆ. ಪಕ್ಕದ ಪಟ್ಟಣಕ್ಕೆ ಊರಿಗೆ ಇದ್ದ ಬೆಳಿಗ್ಗೆಗೆ ಮತ್ತೆ ಸಂಜೆಗೆ ಒಂದೇ ಇದ್ದ ಕೆಂಪು ಬಸ್ ಹತ್ತಿ ಒಬ್ಬಳೇ ಎರಡು ತಾಸು ಪ್ರಯಾಣ ಮಾಡಿ ಶಾಲೆ ಮುಗಿಸುತ್ತಿದ್ದೆ! ಇತ್ತೀಚೆಗೆ ಅಮ್ಮ ಮಗಳು ದೊಡ್ಡವಳಾಗಿದ್ದಾಳೆ ಮದುವೆ ಮಾಡಬೇಕೆಂದು ಅಪ್ಪನಿಗೆ ದುಂಬಾಲು ಬಿದ್ದಿದ್ದಳು. ಅವಳ ಮಾತಿಗೆ ಅಪ್ಪ, ಸೊಪ್ಪು ಹಾಕುತ್ತಿರಲಿಲ್ಲ. ಮಗಳು ಚಿಕ್ಕವಳು ಇನ್ನೂ ಓದುತ್ತಿದ್ದಾಳೆ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದರು. ಈ ಬಾರಿ ನಾನು ೧೦ನೇ ತರಗತಿ ಪಬ್ಲಿಕ್ ಪರೀಕ್ಷೆ... ನನಗಂತೂ ಇಮ್ಮಡಿ ಉತ್ಸಾಹ... ಶಾಲೆಯ ಉಪಾಧ್ಯಾಯರುಗಳಿಗಂತೂ ನನ್ನ ಮೇಲೆ ಅಪರಿಮಿತ ನಂಬಿಕೆ... ಹಿಂದೆಂದೂ ದೊರೆಯದ rank ಈ ಬಾರಿ ನಮ್ಮ ಶಾಲೆಗೆ ದೊರೆಯುತ್ತದೆ ಎಂಬ ವಿಶ್ವಾಸ ಅವರದು. ನಾನು ಕೂಡ ಅಮ್ಮ ಹೇಳಿದ ಮನೆಗೆಲಸವನ್ನೆಲ್ಲಾ ಸರ ಸರನೆ ಮುಗಿಸಿ ಓದಲು ಕೂರುತ್ತಿದ್ದೆ. ಪೂರ್ವ ಪರೀಕ್ಷೆಗಳಲ್ಲೆಲ್ಲಾ ನೂರಕ್ಕೆ ನೂರು ತೆಗೆದೆ. ಮುಖ್ಯ ಪರೀಕ್ಷೆ ಬಂದೇ ಬಿಟ್ಟಿತು ಮೊದಲನೆಯದೇ ಕನ್ನಡ ಪರೀಕ್ಷೆ ಚೆನ್ನಾಗಿ ಓದಿ ಮನಗತ ಮಾಡಿಕೊಂಡಿದ್ದೆ... ಬೇಗನೇ ಎದ್ದು ಮನೆಯ ಮುಂದೆಯೇ ಇದ್ದ ಬಸ್ ನಿಲ್ದಾಣದಲ್ಲಿ ೮ ಘಂಟೆಯ ಬಸ್ ಗೆ ಕಾದಿದ್ದೆ... ದೂರದಲ್ಲಿ ಬಸ್ ನ ಉಬ್ಬಸದ ಸ್ವರ ಬರುತ್ತಿತ್ತು... ಹತ್ತಿರ ಬರುತ್ತಿದ್ದ ಆ ಬಸ್ ಬಸಿರಿಯಂತೆ ಕಾಣುತ್ತಿತ್ತು ಪಟ್ಟಣದ ಛತ್ರದಲ್ಲಿ ಬೆಳಿಗ್ಗೆಯೇ ಮದುವೆಗೆ ಹೊರಟ ಹಿಂದಿನ ಹಳ್ಳಿಯ ಮಂದಿ ಬಾಗಿಲಿನಲ್ಲಿ ತೂಗಾಡುತ್ತಿದ್ದರು... ಬಸ್ಸಿನ ಚಾಲಕನಿಗೆ ನಿಲ್ಲಿಸು ಎಂದು ಕೈ ಬೀಸಿದೆ... ಆತ ನನ್ನೆಡೆ ನಿಸ್ಸಹಾಯಕ ನೋಟ ಬೀರಿದ... "ರಸ್ತೆಯಂಚಿನಲ್ಲಿ ನಿಂತು ಜೋರಾಗಿ ನಾನು ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು..." ಮನೆಯ ಬಾಗಿಲಿನಲ್ಲಿ ನಿಂತಿದ್ದ ನನ್ನಮ್ಮನ ಕಣ್ಣು ದಿಬ್ಬಣದ ಬಸ್ ನೋಡಿ ಮಗಳ ಮದುವೆಯ ಕನಸು ಕಾಣುತ್ತಿತ್ತು... ನನ್ನ ಕಣ್ಣು ಮಂಜಾಗುತಿತ್ತು...
#ಸುರೇಶ ಶೆಟ್ಟಿ
ನಿನ್ನೆ ಜೀವನನೇ ಒಂದು ಓಟ ಅಂತ ಸಾಧುವೊಬ್ಬ ಹಾಡ್ಕೋತಾ ಹೋಗಿದ್ದು ನನ್ನ ಕುರಿತೇನಾ ಅಂತ ಅನಿಸ್ತಿದೆ ಇವತ್ತು. ಬೆಳಗ್ಗೆ ಎದ್ದಾಗಿಂದ ಎಲ್ಲಾ ಲೇಟು. ಸ್ನಾನಕ್ಕೆ ನೀರು ಕಾಯಿಸಿಕೊಳ್ಳೋಣ ಅಂದ್ರೆ ಕರೆಂಟಿಲ್ಲ. ಹಂಡೇಲೂ ಚೂರೇ ನೀರು. ಟ್ಯಾಂಕಿಯಿಂದ ಎತ್ತಿದ ತಣ್ಣೀರು ಸ್ನಾನವೇ ಸಾಹಸ. ನಾನಿಲ್ಲ ಅಂದ್ರೆ ಲೇಟಾಗಿ ಏಳ್ತೀಯ, ತಿಂಡಿ-ಗಿಂಡಿ ಮಾಡ್ಕೊಳ್ಳೋಕೆ ಹೋಗ್ಬೇಡ ಅಂತ ಅಮ್ಮ ಹೇಳಿದ ಮಾತು ಕೇಳ್ಬೇಕಿತ್ತು ಅಂತ ದೋಸೆ ಎರೆಯೋಕೆ ಅರ್ಧ ಘಂಟೆ ತಗೊಂಡಾಗ್ಲೇ ಆರ್ಥ ಆಗಿದ್ದು. ಲೇಟಾಗ್ಬಿಟ್ಟಿದೆ. ಬಸ್ಸು ಮಿಸ್ಸಾಗ್ಬಿಡ್ಬೋದು. ಸೈಕಲ್ಲಲ್ಲಿ ಹೋಗೋಣ್ವಾ ಅಂದಾಗ ನೆನ್ಪಾಯ್ತು, ಅದು ಪಂಚರಾಗಿ ಮೂರು ದಿನ ಆಗಿದೆ ಅಂತ. ಥತ್ತೇರಿ. ಕಾಲೇಜಿನ ಬಸ್ಟಾಪು ಮುಕ್ಕಾಲು ಕಿ.ಮಿ ದೂರ. ಬಸ್ಸು ಹೋಗೋಕೆ ಇನ್ನು ಆರು ನಿಮಿಷ ಇದೆ ಅಷ್ಟೆ. ಉಳಿದಿದ್ದೊಂದೇ ದಾರಿ. ಓಡು ಮಗ, ಓಡು. ಅಂತೂ ಉಸಿರೆಲ್ಲಾ ಬಾಯಿಗೆ ಬರೋ ತರ ಓಡಿ ಸ್ಟಾಪಿಗೆ ಬರೋ ಹೊತ್ತಿಗೆ ಬಸ್ಸೇ ಬಂದು ಬಿಡೋದೇ ? ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು. ಕೈ ಮಾಡ್ದಲ್ಲಿ ನಿಲ್ಸೋದಲ್ವಾ ?ಸ್ಲೋನೇ ಇದ್ರೂ ಹಾಳಾದವ್ನು ಮುಂದೆ ಹೋಗ್ಬಿಟ್ಟಿದ್ದಾನೆ. ಹತ್ತುತೀನೋ ಇಲ್ವೋ ಅನ್ನೋ ಅನುಮಾನದಲ್ಲಿರೋ ತರ ಅಂತೂ ನಿಲ್ಸಿದ !ಓಡುಮಗ ಓಡುಮಗ. ಈ ಬಸ್ಸು ಬಿಟ್ಟು ಹೋದ್ರೆ ಇವತ್ತಿನೀ ಓಡುವಿಕೆಗೆ ಎಲ್ಲಿ ಮುಕ್ತಾಯವೋ.
#ಪ್ರಶಸ್ತಿ ಪ್ರಭಾಕರ
ಹೆಣ್ಣಾಗಿ ಹುಟ್ಟಿದಕ್ಕೆ ಖುಷಿ ಇದ್ದರೂ ಕೆಲವು ಸಲ ಥೂ ಯಾಕಪ್ಪ ಹುಟ್ಟಿದೆ ಹೆಣ್ಣಾಗಿ ಅನ್ನಿಸುತ್ತೆ...ನನ್ನಪ್ಪನಿಗೆ ಗಂಡು ಮಕ್ಕಳು ಇಲ್ಲ ಎಂಬ ಕೊರಗನ್ನು ನೀಗಿಸಲು ನಾನು ಹುಡುಗನ ಹಾಗೆ ಬೆಳೆದೆ. ಅಪ್ಪನಿಗೆ ಕಷ್ಟ ಆದರೂ ನಮ್ಮ ಹಳ್ಳಿಯಿಂದ ಐದು ಕಿಲೊಮೀಟರ್ ದೂರದಲ್ಲಿದ್ದ ಪಟ್ಟಣದ ಕಾಲೇಜಿಗೆ ಸೇರಿಸಿದ್ದರು. ದಿನಾ ಕಾಲೇಜಿಗೆ ಊರಿಗೆ ಇದ್ದ ಒಂದೆ ಬಸ್ಸು ಚೆನ್ನಬಸವೇಶ್ವರ ಬಸ್ಸಿನಲ್ಲೆ ಹೋಗುತ್ತಿದ್ದೆ. ಬಸ್ ತುಂಬಿ ಹೋಗುತ್ತಿದ್ದರಿಂದ ಡ್ರೈವರ್ ಹಿಂದೆ ಖಾಯಂ ಆಗಿ ನಿಲ್ಲುತ್ತ ಇದ್ದೆ. ಡ್ರೈವರ್ ಕನ್ನಡಿಯಲ್ಲಿ ಯಾವಾಗಲೂ ನನ್ನನ್ನೆ ನೋಡುತ್ತಿದ್ದ. ದಿನಕಳೆದಂತೆ ಅವನ ವರ್ತನೆ ಬದಲಾಗತೊಡಗಿತು. ಒಂದಿನ ಮೈ ಮುಟ್ಟಿದನೆಂದು ಅವನಿಗೊಮ್ಮೆ ಕೆಂಗಣ್ಣು ಬಿಟ್ಟು ಅವನ ಬಸ್ಸಿಗೆ ನಮಸ್ಕಾರ ಹಾಕಿ ಅಪ್ಪನೆದುರು ಹಠ ಮಾಡಿ ಸೈಕಲ್ ಕೊಡಿಸಿಕೊಂಡು ಅದರಲ್ಲೆ ಕಾಲೇಜಿಗೆ ಹೋಗಿ ಬರಲು ಶುರುಮಾಡಿದೆ. ಆಗ ಬೇಸಿಗೆ ಆದ್ದರಿಂದ ಮಳೆಗಾಲದ ಅರಿವಿರಲಿಲ್ಲ. ಮಳೆಗಾಲ ಶುರುವಾಯಿತು. ಸೈಕಲ್ ನಲ್ಲಿ ಹೋಗಲು ಆಗುತ್ತಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಕಾಲೇಜಿಗೆ ಚಕ್ಕರ್ ಸಹ ಆಗುತಿತ್ತು. ಪರೀಕ್ಷೆ ಶುರುವಾಯಿತು...ಮುಂಜಾನೆ ಹಿಡಿದ ಮಳೆ ಜಡಿ ಕಡಿಮೆ ಆಗಲೇ ಇಲ್ಲ...ಬಸ್ಸಿನಲ್ಲೆ ಕಾಲೇಜಿಗೆ ಹೋಗೊಣವೆಂದು "ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು............ನಾ ಆ ದಿನ ಬಿಟ್ಟ ಕೆಂಗಣ್ಣಿಗೆ ಡ್ರೈವರ್ ಬಸ್ ನಿಲ್ಲಿಸಲೇ ಇಲ್ಲ."
#ಮಹೇಶ ಸಿದ್ದಲಿಂಗಪ್ಪ
ನಿನ್ನೆ ಮೊನ್ನೆಯಷ್ಟೇ ಅಂಬೆಗಾಲು ಹಾಕುತ್ತಿದ್ದ ಕಂದ ಇಂದು ಶಾಲೆಗೆ ಹೋಗುವಷ್ಟು ದೊಡ್ಡವನಾಗಿದ್ದಾನೆ .. ಕುರುಡು ಕಾಂಚಾಣದ ಬೆನ್ನು ಬಿದ್ದು ಮಗನ ಆಟೋಟಗಳೆ ಕಾಣದಷ್ಟು ಕುರಡನಾಗಿದ್ದೆನಾ ಅನ್ನಿಸಿ ಅರಿಯದೆ ಕಣ್ಣಂಚು ಒದ್ದೆಯಾಗಿತ್ತು .. ಬಸ್ ದೂರ ಸಾಗಿದ್ದರು ಇನ್ನು ಜೋರಾಗಿ ಕೈ ಬೀಸುತ್ತಲೇ ಇದ್ದೆ .
#ಶ್ರೀಧರ ಭಟ್ಟ
ಊರಿನಿಂದ ಬಂದಿದ್ದ ಹಳೆಯ ಗೆಳೆಯ ಕುಳಿತ ಬಸ್ಸು ಮೆಲ್ಲನೆ ಮುಂದೆ ಸಾಗುತ್ತಿದ್ದರೆ ಮನಸ್ಸು ಹಿಂದಕ್ಕೋಡುತ್ತಿತ್ತು. ಆಡಬೇಕಿದ್ದ ಸಾವಿರ ಮಾತುಗಳು ಎರಡು ಸಿನಿಮಾ, ಮೂರು ಡಿನ್ನರ್ ಗಳ ನಡುವೆ ಕಳೆದು ಹೋಗಿದ್ದವು. ಹಳೆಯದೆಲ್ಲ ಅರ್ಥಹೀನ, ವರ್ತಮಾನ ಕೃತಕ, ಮರುದಿನ ಆಫೀಸಿನಲ್ಲಿ ಮಾಡಬೇಕಿದ್ದ ಕೆಲಸ ಮಾತ್ರ ಶಾಶ್ವತ ಸತ್ಯ ಎಂದೆನಿಸುತ್ತಿತ್ತು. ನಾನು ಮಾತಾಡದಿರುವುದು ಕಂಡು ಅವನೂ ಮಾತು ನಿಲ್ಲಿಸಿದ್ದ. ಅವನ ಪಾದರಸದಂಥ ವ್ಯಕ್ತಿತ್ವಕ್ಕೂ ನನ್ನ ಮಂಕುತನ ಬಡಿದುಬಿಟ್ಟಿತು. ಎರಡು ಸಿನಿಮಾ, ಮೂರು ಡಿನ್ನರುಗಳಲ್ಲಿ ಅವನ ಬೆಂಗಳೂರು ಪ್ರವಾಸ ಮುಗಿದುಬಿಟ್ಟದ್ದು ನನಗೆ ಹೊಳೆದದ್ದು ಅವನು ವಾಪಾಸು ಊರಿಗೆ ಬಸ್ಸು ಹತ್ತಿದಾಗಲೇ. ಟಾಟಾ ಆದರೂ ಮಾಡೋಣ ಎಂದುಕೊಂಡೆ. ರಸ್ತೆಯಂಚಿನಲ್ಲಿ ನಿಂತ ನಾನು ಜೋರಾಗಿ ಕೈ ಬೀಸುತ್ತಿದ್ದರೆ, ಅವನು ಕುಳಿತ ಬಸ್ಸು ಮೆಲ್ಲನೆ ಸಾಗುತ್ತಿತ್ತು. ಬಹುಷಃ ನನ್ನ ಪ್ರಪಂಚ ಬದಲಾಗಿರುವುದು ಅವನಿಗೂ ಗೊತ್ತಾಗಿರಬೇಕು; ಅವನು ನನ್ನತ್ತ ನೋಡಲೇ ಇಲ್ಲ.
#ಕಿರಣ ಕುಮಾರ
ಉದ್ಯಾನ ನಗರಿಯ ಕಾಲೇಜೊಂದರಲ್ಲಿ ಓದುತ್ತಿದ್ದ ಮಗನ ನೋಡಲು ಬಂದ ತಾಯಿಯನ್ನ ಮಗ ವಾಪಸ್ ಮನೆಗೆ ಕಳಿಸಲು ಬಸ್ ನಿಲ್ದಾಣಕ್ಕೆ ಹೋಗಿದ್ದ ...ಕರುಳು ಹಿಂಡುವಷ್ಟು ನೋವು..ಕಣ್ಣಿನಲ್ಲಿ ಜಿನುಗುವ ನೀರು ಹಾಗೂ ಅದನ್ನು ಮರೆಮಾಚುವಂಥಹ ಗಡಿಬಿಡಿ..ಅಂತೂ ಬಸ್ ಹೊರಟೇ ಬಿಟ್ಟಿತು..ದುಃಖ ಮಡುಗಟ್ಟಿತ್ತು...ತಾಯಿಯ ಕಣ್ಣೀರ ಕಂಡ ಮಗನ ಕಣ್ಣು ಒದ್ದೆಯಾಗಿ ಗಂಟಲು ಬಿಗಿದಿತ್ತು.."ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ ಬಸ್ಸು ಮೆಲ್ಲನೆ ಸಾಗುತ್ತಿತ್ತು.."
#ಪ್ರಥ್ವಿರಾಜ ಕಶ್ಯಪ
ಪುಟ್ಟ, "ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು.....ಮರೆಯಾಗುವವರೆಗೆ ಕೈ ಬೀಸಿದ.. ಇದೇನು ಹೊಸತಲ್ಲ ಪ್ರತಿದಿನವೂ ಪುಟ್ಟ ಇದೇ ರೀತಿ ಕೈ ಬೀಸಿಯೇ ಬೀಸುತ್ತಾನೆ.ಒಂದಲ್ಲ ಒಂದು ದಿನ ಯಾರಾದರೂ ನನ್ನ ಕೈ ಬೀಸುವಿಕೆಗೆ ಉತ್ತರವಾಗಿ ನನಗೂ ಕೈ ಬೀಸಿ ಮುಗುಳ್ನಕ್ಕಾರು ಎಂಬ ಅವನ ಆಸೆಯ ಕುಡಿಯಿನ್ನೂ ನಂದಿಲ್ಲ ..
#ಅನಿತಾ ನರೇಶ ಮಂಚಿ
ಬಸ್ಸು ಮೆಲ್ಲನೆ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತಿತ್ತು, ಅವಳು ತನ್ನ ಕನಸು ನನಸಾಗುತ್ತಿರುವ ಖುಷಿಯಲ್ಲಿ ಮಾಯಾನಗರಿಯತ್ತ ಹೆಜ್ಜೆಯಿಟ್ಟದ್ದಳು. ಇವನು ಜೋರಾಗಿ ಕೈ ಬೀಸುತ್ತ ತನ್ನ ಕನಸು ಕೈ ಜಾರಿದ ದುಃಖವನ್ನು ಮರೆಮಾಚಿದ್ದನು.
#ಸೂರಿ ಸರಿ ತಪ್ಪುಗಳ ನಡುವೆ
ಇಡೀ ಊರಿನ ಮಂದಿ ರಸ್ತೆ ಬದಿಯಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ.. ಬಸ್ಸು ನಿದಾನವಾಗಿ ಸಾಗುತ್ತಿತ್ತು... ಸರ್ಕಾರಿ ಕಛೇರಿ ಮುಂದೆ ಧರಣಿ ಕುಳಿತು ಯಾವ ಆಮಿಶಕ್ಕೂ ಜಗ್ಗದೇ ತಮ್ಮ ಊರಿಗೆ ಬಸ್ಸು ಬರುವಂತೆ ಮಾಡಿದ ಶ್ಯಾಮರಾಯರು ಸಂತಸದಿಂದ ಭೀಗುತ್ತಿದ್ದರು.... ಇದೆಲ್ಲ ಆಗಿ ಕೆಲ ದಶಕಗಳೇ ಕಳೆದಿವೆ... ಅಂದು ಬಂದ ಬಸ್ಸು ಊರಿನ ಸಂಪೂರ್ಣ ಚಿತ್ರಣವನ್ನೇ ಬದಲಿಸಿತು... ಮೊದಮೊದಲು ಶಹರಕ್ಕೆ ಸಂಪರ್ಕ ಕಲ್ಪಿಸಿದ ಕಾಮದೇನುವಿನಂತೆ ಕಂಡ ಬಸ್ಸು ಈಗೀಗ ಹಿರಿಯರ ಕಣ್ಣಲ್ಲಿ ತಮ್ಮ ಕರುಳ ಕುಡಿಗಳ ಕಡಿದ ಕಳನಾಯಕನಂತೆ ಕಾಣುತ್ತಿದೆ... ಅಪ್ಪ ಸಮಾಜ ಸೇವೆ ಅದೂ ಇದು ಮಣ್ಣು ಮಸಿ ಅಂತ ಊರಿಗೆ ಬಸ್ಸು ಬರೋ ಹಾಗೆ ಮಾಡದಿದ್ರೆ ನಮಗೆ ಇವತ್ತು ಈ ಗತಿ ಬರ್ತಿರ್ಲಿಲ್ಲ... ಮುಖಕ್ಕೆ ಮಸೀ ಬಳ್ದು ಹೋದ್ಳಲ್ಲೇ ನಿನ್ನ ಮಗಳು.. ಓಡಿ ಹೋಗೋಕೆ ಆ ಬಸ್ಸಿನ ಡ್ರೈವರೇ ಬೇಕಿತ್ತ.. ಮಡದಿ ಎದುರು ಎಗರಾಡುತ್ತಿದ್ದ ಮಗನ ಕೂಗು.... ಹಾಸಿಗೆಯಲ್ಲಿ ಕೊನೆದಿನಗಳನ್ನು ಎಣಿಸ್ತಿರೋ ಶ್ಯಾಮರಾಯರ ಕಿವಿಗೆ ಬೇಡವೆಂದರೂ ಬೆಂಕಿಯಂತೆ ಬಡಿಯುತ್ತಿತ್ತು.
#ದಿಲೀಪ ಹೆಗಡೆ
ನಿನ್ನ ಬಗ್ಗೆ ನನಗೆ ಈಗ ಕೇವಲ ಸ್ನೇಹಿತನೆಂಬ ಭಾವವಿದೆಯೇ ಹೊರತು ಬೇರಾವ ಭಾವನೆಗಳಿಲ್ಲ. ಹಿಂದೆಂದೂ ಪಿ.ಯು.ಸಿ. ಯಲ್ಲಿ ಏನೂ ಅರಿಯದ ವಯಸ್ಸಿನಲ್ಲಿ ಆಕರ್ಷಣೆಗೆ ಒಳಗಾಗಿ ಪ್ರೇಮ ಪತ್ರಗಳು ವಿನಿಮಯವಾಗಿದ್ದು ನಿಜವಿದ್ದರೂ, ಅದೆಲ್ಲಾ ಹಳೆಯ ಕಥೆ. ನಾನು ಈಗ ಇಂಜಿನೀಯರಿಂಗ್ ಮುಗಿಸಿ ಕೆಲಸಕ್ಕೆ ಸೇರಲು ಹೋಗ್ತಾ ಇದ್ದೀನಿ. ನೀನು ಏನಾದರೂ ಸಾಧನೆ ಮಾಡು. ನನ್ನ ಬಗ್ಗೆ ಇಲ್ಲದ ಆಲೋಚನೆಗಳನ್ನೆಲ್ಲಾ ಮನಸಲ್ಲಿಟ್ಟುಕೊಂಡು ಕನಸು ಕಾಣಬೇಡ” ಎಂದು ಅತ್ತೆಯ ಮಗಳು ನಿರ್ಭಾವುಕಳಾಗಿ ಹೇಳಿದಳು. ಅಷ್ಟರಲ್ಲಿ ಬಸ್ಸು ಬಂತು. ಏನೂ ಮಾತನಾಡದೇ ಮೂಕ ಪ್ರಾಣಿಯ ಹಾಗೆ ಮನದೊಳಗೆ ಬೇಗುತ್ತಾ, ಅವಳ ಲಗ್ಗೇಜನ್ನು ಬಸ್ಸಿನಲ್ಲಿರಿಸಿ, ಕಂಡಕ್ಟರ್ ಗೆ ಹೇಳಿ ಬೆಂಗಳೂರಿಗೆ ಟಿಕೆಟ್ ತೆಗೆಸಿ ಅವಳ ಕೈಗಿತ್ತನು. ಬಸ್ಸು ಹೊರಟಿತು. "ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು.. ಅವಳ ಮನಸ್ಸು ನಿರಾಳವಾಗಿದ್ದರೆ, ಇಲ್ಲೊಂದು ಮನಸ್ಸಿನಲ್ಲಿ ಸುನಾಮಿಯೊಂದು ಅಪ್ಪಳಿಸಿತ್ತು.
#ಶಿವಶಂಕರ ವಿಷ್ಣು ಯಳವತ್ತಿ